ಬಳ್ಳಾರಿ: ನಗರದ ಜನತೆಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಸಿಹಿ ಸುದ್ದಿ ನೀಡಲು ಸಿದ್ಧತೆಗಳನ್ನು ನಡೆಸಿದೆ.
ನಗರದ ವಿವಿಧೆಡೆ ಮಾರಾಟವಾಗದೇ ಇರುವ ಖಾಲಿ ನಿವೇಶನಗಳನ್ನು ಬಹಿರಂಗವಾಗಿ ಹರಾಜು ಹಾಕಲು ಪ್ರಾಧಿಕಾರದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ.
ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಧೀರ್ಘ ಚರ್ಚೆ ನಡೆಯಿತು.
ರಾಘವೇಂದ್ರ ಕಾಲೋನಿ 2ನೇ ಹಂತದಲ್ಲಿ 26, ಕನಕ ದುರ್ಗಮ್ಮ ಬಡಾವಣೆ , ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 7 ವಸತಿ ನಿವೇಶನ ಹಾಗೂ 1 ವಾಣಿಜ್ಯ ನಿವೇಶನ, ಡಾ.ಸರ್.ಎಂ.ವಿ. ಲಾರಿ ತಂಗುದಾಣದಲ್ಲಿ 11 ವಾಣಿಜ್ಯ ನಿವೇಶನಗಳು, ಕುವೆಂಪುನಗರದಲ್ಲಿ 3 ವಸತಿ ನಿವೇಶನಗಳು, ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ವಾಣಿಜ್ಯ ಸಂಕೀರ್ಣದಲ್ಲಿ 3 ನಿವೇಶನಗಳ ಮಾರಾಟ ನಡೆಯಲಿದೆ ಎಂದು ಶೇಖರ ತಿಳಿಸಿದ್ದಾರೆ.
ಬಿ.ಗೋನಾಳ್ ಗ್ರಾಮದಲ್ಲಿ ಪ್ರಾಧಿಕಾರ ಮತ್ತು ರೈತರ ಸಹಭಾಗಿತ್ವದಲ್ಲಿ 101.98 ಎಕರೆ ಜಮೀನಿನಲ್ಲಿ 50:50 ಅನುಪಾತದಂತೆ, ವಸತಿ ಬಡಾವಣೆಯನ್ನು ನಿರ್ಮಿಸಲು ಇ-ಟೆಂಡರ್ ಕರೆಯಲು ನಿರ್ಧರಿಸಲಾಯಿತು.
ಪ್ರಾಧಿಕಾರದ ವ್ಯಾಪ್ತಿಯಲ್ಲಿ 20 ಜಾಹೀರಾತು ಫಲಕಗಳನ್ನು ತಲಾ ₹10 ಲಕ್ಷದಲ್ಲಿ ನಿರ್ಮಿಸಲು ಸಭೆ ಅನುಮೋದನೆ ನೀಡಿತು.
ಶಾಸಕ ಜಿ.ಸೋಮಶೇಖರ್ ರೆಡ್ಡಿ, ಪ್ರಾಧಿಕಾರದ ಆಯುಕ್ತ ವೀರೇಂದ್ರ ಕುಂದಗೋಳ, ಕಾರ್ಯನಿರ್ವಾಹಕ ಎಂಜಿನಿಯರ್ ರವಿಶಂಕರ್ ಸಭೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.