ಹೊಸಪೇಟೆ: ನಗರದ ವಿವಿಧ ಕಡೆಗಳಲ್ಲಿ ಭಾನುವಾರ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಕೃಷ್ಣ ಮಠ:ಜಂಬುನಾಥ ರಸ್ತೆಯ ಕೃಷ್ಣ ನಗರದ ಕೃಷ್ಣ ಮಠದಲ್ಲಿ ಕೃಷ್ಣನಿಗೆ ಲಕ್ಷ ತುಳಸಿ, ಪುಷ್ಪಾರ್ಚನೆ ಮಾಡಲಾಯಿತು. ನಂತರ ಭಜನೆ ಕಾರ್ಯಕ್ರಮ ನಡೆಯಿತು. ವಿವಿಧ ಕಡೆಗಳಿಂದ ಬಂದಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ಕೃಷ್ಣನ ದರ್ಶನ ಪಡೆದರು. ಹಬ್ಬದ ನಿಮಿತ್ತ ಇಡೀ ದೇಗುಲಕ್ಕೆ ವಿದ್ಯುದ್ದೀಪಲಂಕಾರ ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ವೇಣುಗೋಪಾಲ ದೇಗುಲ:ಇಲ್ಲಿನ ಪಟೇಲ ನಗರದ ವೇಣುಗೋಪಾಲ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಕಳೆ ಕಟ್ಟಿತ್ತು. ಬೆಳಿಗ್ಗೆ ಅರ್ಚಕರು ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ, ಆರತಿ ಮಾಡಿದರು. ನಂತರ ಜನ ಬಂದು ದರ್ಶನ ಪಡೆದರು. ಕೆಲ ಮಕ್ಕಳು ಕೃಷ್ಣ ಹಾಗೂ ರಾಧೆಯಾಗಿ ಗಮನ ಸೆಳೆದರು. ಬೆಳಿಗ್ಗೆಯಿಂದ ಸಂಜೆಯ ವರೆಗೆ ದೇಗುಲದಲ್ಲಿ ಜಾತ್ರೆಯ ವಾತಾವರಣ ಇತ್ತು.
ಬ್ರಹ್ಮಕುಮಾರಿ:ನಗರದ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ವಿಶೇಷ ಪೂಜೆ, ಪ್ರಾರ್ಥನೆ ನಂತರ ಕೃಷ್ಣನ ಭಜನೆ ನಡೆಯಿತು. ವಿವಿಧ ಭಾಗಗಳಿಂದ ಜನ ಬಂದಿದ್ದರು.
ತ್ರೈತ ಸಿದ್ಧಾಂತ ಭಗವದ್ಗೀತಾ ಸೇವಾ ಟ್ರಸ್ಟ್:ಜನ್ಮಾಷ್ಟಮಿ ಪ್ರಯುಕ್ತ ಇಲ್ಲಿನ ಪಟೇಲ್ ನಗರದಲ್ಲಿ ಟ್ರಸ್ಟ್ನಿಂದ ಇದೇ 10ರ ವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾನುವಾರ ಕೃಷ್ಣನ ಪೂಜೆ ನಡೆಯಿತು. ನಿತ್ಯವೂ ಭಗವದ್ಗೀತೆಯ ಚಿಂತನ ಕಾರ್ಯಕ್ರಮ ನಡೆಯಲಿದೆ. 10ರಂದು ಮಧ್ಯಾಹ್ನ 3ಕ್ಕೆ ಕೃಷ್ಣನ ಪಲ್ಲಕ್ಕಿ ಉತ್ಸವ ಹಾಗೂ ತ್ರೈತ ಸಿದ್ಧಾಂತ ಭಗವದ್ಗೀತೆಯ ಶೋಭಾಯಾತ್ರೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.