ADVERTISEMENT

ಬಳ್ಳಾರಿ | ಮೀನುಗಾರಿಕೆಗೆ ‘ಕೃಷಿ’ ಮಾನ್ಯತೆ: ಕೇಂದ್ರದ ಪ್ರಸ್ತಾವ

ಆರ್. ಹರಿಶಂಕರ್
Published 10 ಆಗಸ್ಟ್ 2024, 5:45 IST
Last Updated 10 ಆಗಸ್ಟ್ 2024, 5:45 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಬಳ್ಳಾರಿ: ಮೀನುಗಾರಿಕಾ ವಲಯವನ್ನು ಮತ್ತಷ್ಟು ಉಪಯುಕ್ತ ಮತ್ತು ಲಾಭದಾಯಕವಾಗಿಸಲು ಕೇಂದ್ರ ಸರ್ಕಾರವು ಮೀನುಗಾರಿಕೆಗೆ ಸಬ್ಸಿಡಿ ವಿದ್ಯುತ್, ನೀರಿನ ವ್ಯವಸ್ಥೆ ಮತ್ತು ಡೀಸೆಲ್‌ ಸೇರಿ ಇತರ ಸೌಲಭ್ಯ ಕಲ್ಪಿಸಲು ಉದ್ದೇಶಿಸಿದೆ.

ದೇಶದ ಎಲ್ಲಾ ರಾಜ್ಯಗಳ ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆದಿರುವ ಕೇಂದ್ರ ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಯು, ‘ಕೃಷಿ ಕ್ಷೇತ್ರದ ಮಾದರಿಯಲ್ಲೇ ಮೀನುಗಾರಿಕೆಗೆ ಸೌಲಭ್ಯ ಕಲ್ಪಿಸಲು ಉದ್ದೇಶಿಸಿದೆ. ಅದರ ಕಾರ್ಯಸಾಧ್ಯತೆ ಪರಿಶೀಲಿಸಿ’ ಎಂದು ಸೂಚಿಸಿದೆ.

‘ಒಳನಾಡು ಮೀನು ಸಾಕಣೆ ಹೊಂಡಗಳಿಗೆ ನಾಲೆ, ನದಿಯಿಂದ ನೀರು ಪಂಪ್‌ ಮಾಡಲು ಸ್ಥಳೀಯ ಆಡಳಿತಗಳ ವಿರೋಧ ಇದೆ. ಕೇಂದ್ರ ಸರ್ಕಾರದ ಪ್ರಸ್ತಾವದಂತೆ ಸೌಲಭ್ಯಗಳು ಸಿಕ್ಕರೆ ಒಳನಾಡು ಮೀನು ಕೃಷಿ ಉತ್ಪಾದನಾ ವೆಚ್ಚ ಇಳಿಕೆಯಾಗಿ ಲಾಭ ಆಗಲಿದೆ. ಹೂಡಿಕೆ, ಉದ್ಯೋಗಾವಕಾಶ ಹೆಚ್ಚಲಿದೆ’ ಎಂದು ಬಳ್ಳಾರಿ ಜಿಲ್ಲಾ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಶಿವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

ರಾಜ್ಯದ ಒಳನಾಡಿನಲ್ಲಿ 6.53 ಲಕ್ಷ ಮೀನುಗಾರರು ಮತ್ತು 529 ಸಕ್ರಿಯ ಸಂಘಗಳಿವೆ. ಕರಾವಳಿಯಲ್ಲಿ 1.59 ಲಕ್ಷ ಸಕ್ರಿಯ ಮೀನುಗಾರರಿದ್ದರೆ ಮತ್ತು 120 ಸಕ್ರಿಯ ಸಹಕಾರ ಸಂಘಗಳಿವೆ.

ದೇಶದಲ್ಲಿ 2.8 ಕೋಟಿ ಮೀನುಗಾರರು ‌ಮೀನುಗಾರಿಕಾ ವಲಯವನ್ನೇ ಅವಲಂಬಿಸಿದ್ದಾರೆ. ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದೆ. 2022-23ರಲ್ಲಿ 175.45 ಲಕ್ಷ ಟನ್‌ ಮೀನು ಉತ್ಪಾದನೆಗೊಂಡಿತ್ತು. ಇದರಲ್ಲಿ ಒಳನಾಡು ಮೀನುಕೃಷಿ ಪಾಲು 131.13 ಲಕ್ಷ ಟನ್‌ ಇದ್ದರೆ, ಕರಾವಳಿ ಪಾಲು 44.32 ಲಕ್ಷ ಟನ್‌ ಇತ್ತು.

ವಿದ್ಯುತ್‌ ಮತ್ತು ನೀರಿನ ಸಮಸ್ಯೆಯಿಂದ ಒಳನಾಡು ಮೀನುಗಾರಿಕೆ ಸೊರಗುತ್ತಿದೆ. ಕೇಂದ್ರ ಸರ್ಕಾರದ ಪ್ರಸ್ತಾವದಂತೆ ಕೃಷಿ ಕ್ಷೇತ್ರದ ಮಾದರಿ ಸೌಲಭ್ಯ ಸಿಕ್ಕರೆ ಮೀನುಗಾರಿಕೆ ಕ್ಷೇತ್ರ ಚೇತರಿಕೆ ಆಗಲಿದೆ.
– ಶಿವಣ್ಣ ಉಪ ನಿರ್ದೇಶಕ ಮೀನುಗಾರಿಕಾ ಇಲಾಖೆ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.