ADVERTISEMENT

ಚಿರತೆಗೆ ದಾಳಿಗೆ ಬಾಲಕಿ ಬಲಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 6:32 IST
Last Updated 25 ಡಿಸೆಂಬರ್ 2018, 6:32 IST
ಬಾಲಕಿಯ ಕುಟುಂಬದವರ ಆಕ್ರಂದನ
ಬಾಲಕಿಯ ಕುಟುಂಬದವರ ಆಕ್ರಂದನ   

ಕಂಪ್ಲಿ: ತಾಲ್ಲೂಕಿನ ದೇವಲಾಪುರ ಗ್ರಾಮದ ಕರಿಗುಡ್ಡ ಪ್ರದೇಶದ ಹೊಲದಲ್ಲಿ ಮಂಗಳವಾರ ಬೆಳಿಗ್ಗೆ 10.30 ಸುಮಾರಿಗೆ ಚಿರತೆ ದಾಳಿಗೆ ಬಾಲಕಿ ಬಲಿಯಾಗಿದ್ದಾಳೆ.

ಗ್ರಾಮದ ಕಾರಿಗನೂರು ಪಂಪಾಪತಿ, ಲಕ್ಷ್ಮಿದೇವಿ ಅವರ 9ವರ್ಷದ ಮಗಳು ಜಯಸುಧಾ(4ನೇ ತರಗತಿ) ಬಲಿಯಾದ ಬಾಲಕಿ. ಹತ್ತಿ ಹೊಲದಲ್ಲಿ ಆಡವಾಡುತ್ತಿದ್ದ ಬಾಲಕಿ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ.

ಘಟನೆಯನ್ನು ಕಣ್ಣಾರೆ ಕಂಡ ಮಹಿಳೆಯರು ಜೋರಾಗಿ ಚೀರಾಡಿದ್ದಾರೆ. ಅದರಿಂದ ಬೆದರಿದ ಚಿರತೆ ಬಾಲಕಿಯನ್ನು ಹೊಲದಲ್ಲಿಯೇ ಬಿಟ್ಟು ಕಣ್ಮರೆಯಾಗಿದೆ. ಚಿಕಿತ್ಸೆಗೆ ಕಂಪ್ಲಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿಯೇ ಬಾಲಕಿ ಅಸುನೀಗಿದ್ದಾಳೆ. ಮಂಗಳವಾರ ಕ್ರಿಸ್‌ಮಸ್‌ ನಿಮಿತ್ತ ಶಾಲೆಗೆ ರಜೆ ಇದ್ದರಿಂದ ಕುಟುಂದವರೊಂದಿಗೆ ಬಾಲಕಿ ಹತ್ತಿ ಹೊಲಕ್ಕೆ ತೆರಳಿದ್ದಳು.

ADVERTISEMENT

ದೇವಲಾಪುರ ಪಕ್ಕದ ಸೋಮಲಾಪುರ ಗ್ರಾಮದ ಮೂರು ವರ್ಷದ ಬಾಲಕ ವೆಂಕಟಸ್ವಾಮಿಯನ್ನು ಡಿ. 11ರಂದು ಚಿರತೆ ಹೊತ್ತೊಯ್ದು ಕೊಂದು ಹಾಕಿತ್ತು. ಘಟನೆ ನಡೆದು 11ದಿನದ ನಂತರ (ಡಿ. 21ರಂದು) ಗ್ರಾಮದ ಎರದಮಟ್ಟಿ ಚೆಕ್‌ ಡ್ಯಾಂ ಬೋನುನಲ್ಲಿ ಸೆರೆಯಾಗಿತ್ತು.

ಇದೇ 24ರಂದು ದೇವಲಾಪುರ ಗ್ರಾಮದ ಗೌಸಂದ್ರ ಮಾರೆಮ್ಮ ದೇವಸ್ಥಾನ ಆವರಣದಲ್ಲಿ ಅರಣ್ಯ ಇಲಾಖೆ ದರೋಜಿ ಕರಡಿಧಾಮದವರು ‘ಕಾಡು ಬೆಳೆಸಿ ನಾಡು ಉಳಿಸಿ ಹಾಗೂ ವನ್ಯ ಮೃಗ ರಕ್ಷಣೆ’ ಕುರಿತು ಬೀದಿ ನಾಟಕ ಆಯೋಜಿಸುವ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಿದ್ದನ್ನು ಇಲ್ಲಿ ನೆನಪಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.