ಹೊಸಪೇಟೆ: ಮಕ್ಕಳನ್ನು ದುಡಿಯಲು ಕಳುಹಿಸುವುದು ಮತ್ತು ದುಡಿಸಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ. ಎಳೆ ವಯಸ್ಸಿನ ಕಂದಮ್ಮಗಳಿಗೆ ಕೆಲಸಕ್ಕೆ ಹಚ್ಚಿದರೆ ಅವರ ಜ್ಞಾನಾರ್ಜನೆಗೆ, ಬುದ್ಧಿ ವಿಕಾಸಕ್ಕೆ ತೊಡಕಾಗಿ ಒಟ್ಟಾರೆ ಅವರ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂದುವಕೀಲ ಎ.ಕರುಣಾನಿಧಿ ಹೇಳಿದರು.
ಕಾರ್ಮಿಕ ಇಲಾಖೆ, ಬಾಲ ಕಾರ್ಮಿಕ ಯೋಜನಾ ಸಂಘದಿಂದ ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೈಗಾರಿಕ ಕ್ರಾಂತಿಯ ನಂತರ ಬಾಲ ಕಾರ್ಮಿಕ ಪದ್ಧತಿ ಆಚರಣೆಗೆ ಬಂತು. ಮಕ್ಕಳ ಶೈಕ್ಷಣಿಕ ಹಕ್ಕು, ಬಾಲ್ಯದ ಕನಸು ಕಸಿದುಕೊಳ್ಳುತ್ತದೆ ಎಂಬ ಕಾರಣಕ್ಕಾಗಿ ಬಾಲ ಕಾರ್ಮಿಕ ವಿರೋಧಿ ಕಾನೂನು ತರಲಾಗಿದೆ. ಆದರೆ, ಸಂಪೂರ್ಣವಾಗಿ ಬಾಲಕಾರ್ಮಿಕ ಪದ್ಧತಿ ನಿಂತಿಲ್ಲ ಎಂದು ತಿಳಿಸಿದರು.
ವಯಸ್ಕರಿಗೆ ಹೆಚ್ಚು ಕೂಲಿ ಕೊಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಮಕ್ಕಳನ್ನು ದುಡಿಸಿಕೊಳ್ಳುವ ಪ್ರವೃತ್ತಿ ಇದೆ. ಎಲ್ಲ ದೇಶಗಳಲ್ಲೂ ಈ ಪಿಡುಗು ಇದೆ. ಇದರ ವಿರುದ್ಧ ಕಾರ್ಮಿಕರು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿದರು. ಅದರ ಪರಿಣಾಮವಾಗಿ ಕಾನೂನು ಜಾರಿಗೆ ಬಂತು ಎಂದರು.
ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ಯಾರೇ ದುಡಿಸಿಕೊಂಡರೆ ಅದು ಅಪರಾಧ. ಹದಿನಾಲ್ಕು ವರ್ಷ ಮೇಲಿನವರನ್ನು ಅಪಾಯಕಾರಿಯಲ್ಲದ ಸ್ಥಳಗಳಲ್ಲಿ ಕೌಶಲ ತರಬೇತಿ ನೀಡಬಹುದು ಎಂದು ಹೇಳಿದರು.
ಮಕ್ಕಳನ್ನು ದುಡಿಸಿಕೊಂಡಿರುವುದು ಸಾಬೀತಾದರೆ ಇಪ್ಪತ್ತು ಸಾವಿರ ದಂಡ, ಎರಡು ವರ್ಷ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅಲ್ಲದೇ ಈ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಲು ಅವಕಾಶವಿಲ್ಲ. ಕಡ್ಡಾಯ ಶಿಕ್ಷಣ ಹಕ್ಕು ಜಾರಿಗೆ ತಂದು, ಅದನ್ನು ಯಾರೂ ಉಲ್ಲಂಘಿಸುವಂತಿಲ್ಲ ಎಂಬ ಕಠಿಣವಾದ ನಿಯಮ ಜಾರಿಗೆ ತರಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.