ಹೊಸಪೇಟೆ: ನಗರದ ರೈಲು ನಿಲ್ದಾಣದಲ್ಲಿ ಹೊಸದಾಗಿ ಅಳವಡಿಸಿರುವ ಚೈಲ್ಡ್ಲೈನ್ ಸಹಾಯವಾಣಿ ಫಲಕಗಳನ್ನು ಉಪವಿಭಾಗಾಧಿಕಾರಿ ಗಾರ್ಗಿ ಜೈನ್ ಶುಕ್ರವಾರ ಉದ್ಘಾಟಿಸಿದರು.
ನಿಲ್ದಾಣದ ಪ್ರವೇಶ ದ್ವಾರ, ಟಿಕೆಟ್ ಕೌಂಟರ್, ಪ್ಲಾಟ್ಫಾರಂ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ 1098 ಸಂಖ್ಯೆ ಹೊಂದಿರುವ ಫಲಕಗಳನ್ನು ಅಳವಡಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ 18 ವರ್ಷದೊಳಗಿನ ಮಕ್ಕಳು ಪೋಷಕರಿಂದ ತಪ್ಪಿಸಿಕೊಂಡರೆ 1098 ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಬೇಕು ಎನ್ನುವ ಮಾಹಿತಿ ಫಲಕದಲ್ಲಿದೆ.
ಉಪವಿಭಾಗಾಧಿಕಾರಿ ಗಾರ್ಗಿ ಜೈನ್ ಮಾತನಾಡಿ, ‘ಡಾನ್ ಬಾಸ್ಕೊ, ಮಕ್ಕಳ ಸಹಾಯವಾಣಿ ಹಾಗೂ ರೈಲ್ವೆ ಇಲಾಖೆಯು ಫಲಕಗಳನ್ನು ಅಳವಡಿಸಿ ಉತ್ತಮ ಕೆಲಸ ಮಾಡಿದೆ. ಪೋಷಕರಿಂದ ಮಕ್ಕಳು ತಪ್ಪಿಸಿಕೊಂಡು ಯಾರಿಗಾದರೂ ಸಿಕ್ಕರೆ ಅವರು ಈ ಫಲಕ ನೋಡಿ ಕರೆ ಮಾಡಲು ಅನುಕೂಲವಾಗುತ್ತದೆ. ಸಹಾಯವಾಣಿ 24 ಗಂಟೆ ಕೆಲಸ ನಿರ್ವಹಿಸುತ್ತದೆ’ ಎಂದು ತಿಳಿಸಿದರು.
‘ರೈಲು ನಿಲ್ದಾಣದ ಅಧಿಕಾರಿಗಳ ಸಹಯೋಗದೊಂದಿಗೆ ಕಳೆದ ಒಂದು ವರ್ಷದಲ್ಲಿ ಒಟ್ಟು 22 ಮಕ್ಕಳನ್ನು ರಕ್ಷಿಸಿ ಅವರ ಪೋಷಕರಿಗೆ ಒಪ್ಪಿಸಲಾಗಿದೆ’ ಎಂದು ಮಕ್ಕಳ ಸಹಾಯವಾಣಿ ಸಂಯೋಜಕ ಚಿದಾನಂದ ಹೇಳಿದರು. ಡಾನ್ ಬಾಸ್ಕೊ ಸಂಸ್ಥೆಯ ಫಾದರ್ ಯೇಸುದಾಸ್, ರೈಲು ನಿಲ್ದಾಣದ ಅಧಿಕಾರಿ ಜಿ. ಸುನೀಲ್, ವೈದ್ಯಕೀಯ ಅಧಿಕಾರಿ ಕೆ. ಭಾರ್ಗವಿ, ನಿಲ್ದಾಣದ ಅಧಿಕಾರಿ ಉಮರ್ ಬಾನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.