ಹೊಸಪೇಟೆ: ಕ್ರಿಸ್ಮಸ್ ಹಬ್ಬವನ್ನು ಬುಧವಾರ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕ್ರೈಸ್ತರು ಸಡಗರ, ಸಂಭ್ರಮದಿಂದ ಆಚರಿಸಿದರು.
ಮಂಗಳವಾರ ತಡರಾತ್ರಿಯೇ ಚರ್ಚುಗಳಲ್ಲಿ ಪೂಜಾ ವಿಧಿ ವಿಧಾನ, ಪ್ರಾರ್ಥನೆಗಳು ಆರಂಭಗೊಂಡಿದ್ದವು. ಬೆಳಗಿನ ಜಾವದ ವರೆಗೆ ನಡೆಯಿತು. ಬೆಳಿಗ್ಗೆ ವಿವಿಧ ಬಡಾವಣೆಗಳಿಂದ ಕ್ರೈಸ್ತರು ಚರ್ಚ್ಗೆ ಬಂದು ಮೇಣದ ಬತ್ತಿ ಬೆಳಗಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಕ್ರೈಸ್ತ ಧರ್ಮ ಗುರುಗಳು ಯೇಸುವಿನ ಜನನ, ಮಹತ್ಕಾರ್ಯ, ಧರ್ಮ ಮಾರ್ಗದಲ್ಲಿ ಹೇಗೆ ನಡೆಯಬೇಕು ಎಂಬುದನ್ನು ವಿವರಿಸಿದರು. ವಯಸ್ಕ ಪುರುಷರು ಸೂಟು ಬೂಟು, ಮಹಿಳೆಯರು ಗೌನ್, ಸೀರೆ ತೊಟ್ಟಿದರೆ, ಚಿಣ್ಣರು, ಮೇರಿ, ಸಾಂತಾ ಕ್ಲಾಸ್ ದಿರಿಸಿನಲ್ಲಿ ಕಂಗೊಳಿಸಿದರು. ಸಾಮೂಹಿಕ ಪ್ರಾರ್ಥನೆ ಮುಗಿದ ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಚರ್ಚ್ ಆವರಣಗಳಲ್ಲಿ ವಿಶೇಷವಾಗಿ ಮಾಡಿದ್ದ ಗೋದಲಿ ಕಣ್ತುಂಬಿಕೊಂಡರು. ಮೊಬೈಲ್ ಅದರ ಛಾಯಾಚಿತ್ರ ಸೆರೆ ಹಿಡಿದರು. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು.
ನಗರದ ಕೆಥೋಲಿಕ್ ಚರ್ಚ್, ಸಿ.ಎಸ್.ಐ. ಚರ್ಚ್, ತಾಲ್ಲೂಕಿನ ಕಮಲಾಪುರ, ಮರಿಯಮ್ಮನಹಳ್ಳಿ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ಜರುಗಿತು. ನಂತರ ಕ್ರೈಸ್ತರು ಅವರ ಮನೆಗಳಲ್ಲಿ ಕೇಕ್ ಕತ್ತರಿಸಿ ಕುಟುಂಬ ಸದಸ್ಯರೊಂದಿಗೆ ಹಬ್ಬ ಆಚರಿಸಿದರು. ಬಗೆಬಗೆಯ ಬಿಸ್ಕತ್, ಚಾಕಲೇಟ್, ಸಿಹಿ ಖಾದ್ಯ ಉಣಬಡಿಸಿದರು. ನಂತರ ಉಡುಗೊರೆ ಕೊಟ್ಟು ಶುಭ ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.