ಕಂಪ್ಲಿ: ‘ಬೈಕ್ ಸವಾರರ ಜೀವ ಉಳಿಸುವುದಕ್ಕಾಗಿಯೇ ಹೆಲ್ಮೆಟ್ ಧಾರಣೆ ಕಾನೂನು ಜಾರಿಗೊಳಿಸಿರುವುದು ಎನ್ನುವುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು’ ಡಿವೈಎಸ್ಪಿ ಪ್ರಸಾದ್ ಗೋಖಲೆ ತಿಳಿಸಿದರು.
ಇಲ್ಲಿಯ ಪೊಲೀಸ್ ಠಾಣೆ ಆವರಣದಲ್ಲಿ ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮದಡಿ ಶನಿವಾರ ಹಮ್ಮಿಕೊಂಡಿದ್ದ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ‘ಹೆಲ್ಮೆಟ್ ಧರಿಸಿ ಸಂಚರಿಸುವುದರಿಂದ ಆಕಸ್ಮಿಕ ಅಪಘಾತಗಳು ಎದುರಾದಾಗ ಕನಿಷ್ಠ ತಮ್ಮ ಜೀವವನ್ನು ಉಳಿಸಿಕೊಳ್ಳಬಹುದು’ ಎಂದರು.
ಪ್ರತಿಯೊಬ್ಬರೂ ಚಾಲನೆ ಪರವಾನಗಿ ಕಡ್ಡಾಯವಾಗಿ ಪಡೆದು ವಾಹನಗಳನ್ನು ಚಲಾಯಿಸಬೇಕು ಎಂದರು.
ಪೊಲೀಸ್ ಇನ್ಸ್ಪೆಕ್ಟರ್ ಕೆ.ಬಿ. ವಾಸುಕುಮಾರ್ ಮಾತನಾಡಿ, ‘ಪ್ರಸಕ್ತ ವರ್ಷದಲ್ಲಿ 150 ಜನ ಹೆಲ್ಮೆಟ್ ಧರಿಸದ ಸವಾರರು, ಸೀಟ್ ಬೆಲ್ಟ್ ಧರಿಸದ 112 ಚಾಲಕರು, ಡಿ.ಎಲ್ ಇಲ್ಲದ 50ಮಂದಿ ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ 2000ಕ್ಕೂ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗಿದೆ. ಹೆಲ್ಮೆಟ್ ಧರಿಸದೆ ಅಪಘಾತದಲ್ಲಿ 13ಜನ ಸತ್ತಿದ್ದು, 45ಜನ ಗಾಯಗೊಂಡಿದ್ದಾರೆ’ ಎಂದು ವಿವರಿಸಿದರು.
ಸಂಚಾರ ನಿಯಮ ಪಾಲನೆಯಿಂದ ಸುರಕ್ಷಿತ ಪ್ರಯಾಣ ಸಾಧ್ಯ ಎಂದು ಹೇಳಿದರು
ಎಎಸ್ಐ ಬಿ. ಬಸವರಾಜ ಸೇರಿ ಸಿಬ್ಬಂದಿ ಇದ್ದರು. ಬಳಿಕ ಹೆಲ್ಮೆಟ್ ಜಾಗೃತಿ ಜಾಥಾ ಪೊಲೀಸ್ ಠಾಣೆಯಿಂದ ಆರಂಭಗೊಂಡು ಡಾ. ಅಂಬೇಡ್ಕರ್ ವೃತ್ತ, ನಡುವಲ ಮಸೀದಿ, ವಾರದ ಸಂತೆ ಮಾರುಕಟ್ಟೆ, ಕೊಟ್ಟಾಲ್ ರಸ್ತೆ ಮೂಲಕ ಪುನಃ ಪೊಲೀಸ್ ಠಾಣೆ ಆವರಣದಲ್ಲಿ ಸಮಾವೇಶಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.