ADVERTISEMENT

ಮಹಾಸಭಾ ಹೆಸರಲ್ಲಿ ಗೊಂದಲ, ಖಂಡನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 11:15 IST
Last Updated 15 ಜೂನ್ 2020, 11:15 IST

ಹೊಸಪೇಟೆ: ‘ಕೇರಳದಲ್ಲಿ ಕೆಲವರು ‘ಆಲ್‌ ಇಂಡಿಯಾ ವೀರಶೈವ ಮಹಾಸಭಾ’ ಎಂಬ ಸಂಸ್ಥೆಯನ್ನು ಆರಂಭಿಸಿ, ಬೆಂಗಳೂರಿನಲ್ಲಿ ರಾಜ್ಯ ಘಟಕದ ಕಚೇರಿ ತೆಗೆದಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದಲ್ಲಿ ಗೊಂದಲ ಉಂಟು ಮಾಡುವ ಉದ್ದೇಶದಿಂದ ಈ ಸಂಸ್ಥೆ ಹುಟ್ಟು ಹಾಕಿರುವುದು ತೀವ್ರ ಖಂಡನಾರ್ಹ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಟೀಕಿಸಿದ್ದಾರೆ.

‘ಇಡೀ ದೇಶದಲ್ಲಿ ವೀರಶೈವ ಲಿಂಗಾಯತರನ್ನು ಪ್ರತಿನಿಧಿಸುವ ಏಕೈಕ ಸಂಸ್ಥೆ ಅಖಿಲ ಭಾರತ ವೀರಶೈವ ಮಹಾಸಭೆ ಇದೆ. ದೇಶದ ಎಲ್ಲ ರಾಜ್ಯಗಳಲ್ಲಿ ಇದರ ಘಟಕಗಳಿವೆ. ಬೆಂಗಳೂರಿನ ಸದಾಶಿವನಗರದಲ್ಲಿ ವೀರಶೈವ ಲಿಂಗಾಯತ ಭವನದಲ್ಲಿ ಅಧಿಕೃತ ಕಚೇರಿ ಇದೆ. ಹೀಗಿರುವಾಗ ಇದೇ ಹೆಸರಿನಲ್ಲಿ ಸಂಸ್ಥೆ ಆರಂಭಿಸಿ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವೀರಶೈವ ಮಹಾಸಭೆ ಹೆಸರಿನಲ್ಲೇ ಸಂಸ್ಥೆ ಹುಟ್ಟು ಹಾಕಿದವರ ವಿರುದ್ಧ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಸಮಾಜದವರು ಈ ಸಂಸ್ಥೆಯೊಂದಿಗೆ ಯಾವುದೇ ರೀತಿಯಿಂದ ವ್ಯವಹರಿಸಿ, ಮೋಸ ಹೋಗಬಾರದು’ ಎಂದು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.