ಹೊಸಪೇಟೆ: ‘ಕುವೆಂಪು ಅವರ ಪತ್ರಗಳಿಗೆ ಸಂಬಂಧಿಸಿದಂತೆ ಕುವೆಂಪು ಅವರಿಂದಲೇ ಹಕ್ಕುಸ್ವಾಮ್ಯತೆ ಹೊಂದಿರುವುದರ ಬಗ್ಗೆ ಅಧಿಕೃತ ದಾಖಲೆ ಒದಗಿಸುವಂತೆ ಹಿರಿಯ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಅವರಿಗೆ ಕುವೆಂಪು ಸಮಗ್ರ ಸಾಹಿತ್ಯದ ಸಂಪಾದಕರು ಬರೆದಿರುವ ಪತ್ರಕ್ಕೆ ಅವರು ಇದುವರೆಗೆ ಪ್ರತಿಕ್ರಿಯಿಸಿಲ್ಲ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ತಿಳಿಸಿದ್ದಾರೆ.
‘ಹಕ್ಕುಸ್ವಾಮ್ಯತೆ ಕುರಿತು ಅಧಿಕೃತ ದಾಖಲೆಗಳ ಮೂಲಕ ಅವರು ಮೊದಲು ನಿರೂಪಿಸಬೇಕು. ನಂತರ ಆರೋಪ ಮಾಡಬೇಕು. ಆದರೆ, ಇದುವರೆಗೆ ಅವರು ಅದನ್ನು ನಿರೂಪಿಸಿಲ್ಲ. ಹರಿಹರಪ್ರಿಯ ಅವರು ಕುವೆಂಪು ಅವರ 62 ಪತ್ರಗಳ ಪುಸ್ತಕದ ಸಂಪಾದಕರಾಗಿದ್ದಾರೆ ಹೊರತು ಪತ್ರಗಳ ಲೇಖಕರಲ್ಲ. ಕುವೆಂಪು ಅವರು ಬರೆದ 62 ಪತ್ರಗಳನ್ನು ತಿದ್ದುಪಡಿ ಮಾಡದೆ ಯಥಾವತ್ತಾಗಿ ವಿಶ್ವವಿದ್ಯಾಲಯ ಪ್ರಕಟಿಸಿದೆ ಎನ್ನುವುದು ಅವರ ಆರೋಪ. ಅದನ್ನು ವಿಶ್ವವಿದ್ಯಾಲಯವೂ ಒಪ್ಪಿಕೊಂಡಿದೆ’ ಎಂದು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುಸ್ತಕಮನೆ ಹರಿಹರಪ್ರಿಯ ಅವರು 1974ರಲ್ಲಿ ಬರೆದ ‘ಕುವೆಂಪು ಪತ್ರಗಳು’ ಪುಸ್ತಕದಿಂದ ಕುವೆಂಪು ಅವರ 62 ಪತ್ರಗಳನ್ನು ಯಥಾವತ್ತಾಗಿ ತೆಗೆದುಕೊಂಡು ಕನ್ನಡ ವಿಶ್ವವಿದ್ಯಾಲಯವು ಕುವೆಂಪು ಸಮಗ್ರ ಸಾಹಿತ್ಯದ ಹನ್ನೆರಡನೇ ಸಂಪುಟದಲ್ಲಿ ಪ್ರಕಟಿಸಿದೆ ಎಂಬ ಆರೋಪವಿದೆ. ಕೃತಿಚೌರ್ಯಕ್ಕೆ ಸಂಬಂಧಿಸಿದಂತೆ ಹರಿಹರಪ್ರಿಯ ಅವರು ಕೋರ್ಟ್ ಮೆಟ್ಟಿಲೇರಿದ್ದು, ಜ. 22ರಂದು ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಸೆಷೆನ್ಸ್ ನ್ಯಾಯಾಲಯ ಜ. 16ರಂದು ಸಮನ್ಸ್ ಹೊರಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.