ADVERTISEMENT

ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದಂಪತಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 9:59 IST
Last Updated 25 ಫೆಬ್ರುವರಿ 2022, 9:59 IST
   

ಬಳ್ಳಾರಿ: ಚೇಳ್ಳಗುರ್ಕಿಯ ಯರ್ರಿತಾತನ ಮಠದ ಬಳಿಯ ತೋಟದ ಮನೆ ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಕ್ರವಾರ ಬೆಳಗಿನ ಜಾವ ನಡೆದಿದೆ.

ಕಂಪ್ಲಿ ತಾಲ್ಲೂಕಿನ ಶ್ರೀರಾಮರಂಗಾಪುರದ ಮೆಣಸಿನಕಾಯಿ ರಾಮಯ್ಯ (75) ಮತ್ತು ಜಯಮ್ಮ (60) ಎಂದು ಗುರುತಿಸಲಾಗಿದೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಬಳ್ಳಾರಿ ಮಗಳ ಮನೆಯಲ್ಲಿ ಇದ್ದ ದಂಪತಿ ಗುರುವಾರ ಹೊರಗೆ ಹೋಗಿ ಬರುವುದಾಗಿ ಹೇಳಿ ಚೇಳ್ಳಗುರ್ಕಿ ಮಠಕ್ಕೆ ಬಂದಿದ್ದರು.

ಅಲ್ಲಿ ತಂಗಿದ್ದ ಅವರು ಮಧ್ಯರಾತ್ರಿ 500 ಮೀಟರ್‌ ದೂರದಲ್ಲಿರುವ ತೋಟದ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ADVERTISEMENT

ಆದರೆ, ಹತ್ತು ವರ್ಷದ ಹಿಂದೆ ಸಂಬಂಧಿಯೊಬ್ಬರಿಗೆ ₹20 ಲಕ್ಷ ಕೊಟ್ಟಿದ್ದರು. ಹಣ ಪಡೆದವರು ಸ್ವಲ್ಪ ಮೊತ್ತ ಹಿಂತಿರುಗಿಸಿದ್ದರು. ಮಿಕ್ಕ ಹಣಕ್ಕಾಗಿ ಜಗಳ ಆಗುತಿತ್ತು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ತಿಳಿಸಿದರು.

ರಾಮಯ್ಯ ತಮ್ಮ ಮೊಬೈಲ್‌ ಫೋನನ್ನು ಮಗಳ ಮನೆಯಲ್ಲೇ ಬಿಟ್ಟು ಬಂದಿದ್ದಾರೆ. ಕಂಪ್ಲಿಯ ಎಸ್‌.ಆರ್‌ಪುರದಲ್ಲಿ ಇವರಿಗೆ 20 ಎಕರೆ ಜಮೀನಿದೆ ಎಂದೂ ಎಸ್‌.ಪಿ ಹೇಳಿದರು.

ಘಟನೆಯ ಸ್ಥಳಕ್ಕೆ ಪಿ.ಡಿ ಹಳ್ಳಿ ಸಬ್‌ ಇನ್‌ಸ್ಪೆಕ್ಟರ್ ಶಶಿಧರ್‌ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣದ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.