ತೆಕ್ಕಲಕೋಟೆ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಹತ್ತಿ ಬೆಳೆಯ ಹೂ ಹಾಗು ಕಾಯಿ ನೆಲಕ್ಕೆ ಉದುರಿ ಬೀಳುತ್ತಿವೆ. ಇದರಿಂದ ರೈತರ ಆತಂಕ ಹೆಚ್ಚಾಗಿದೆ.
ಅಲ್ಲದೆ ಹೊಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದ್ದು, ಹತ್ತಿ ಬೆಳೆಗೆ ಬಾಲಹುಳ ಬಾಧೆ ಕಾಣಿಸಿಕೊಂಡಿದೆ.
ರೈತರಾದ ಕಟುಗರ ಮಹಭಾಷ ಹಾಗೂ ಕುರುಬರ ನರಸಿಂಹ ಇವರ ಹತ್ತಿ ಹೊಲಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೂ ಮತ್ತು ಕಾಯಿ ನೆಲಕ್ಕೆ ಬಿದ್ದಿರುವುದು ಕಂಡು ಬಂದಿದೆ. ಅಲ್ಲದೆ ತಂಪು ಹೆಚ್ಚಾಗಿ ಬೆಳೆ ಕಂದು ಬಣ್ಣಕ್ಕೆ ತಿರುಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಶಾನವಾಸಪುರ, ಊಳೂರು, ಉತ್ತನೂರು, ಕೆಂಚನಗುಡ್ಡ, ಕರೂರು, ಎಂ.ಸುಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ.
ಐದು ಮನೆಗಳಿಗೆ ಹಾನಿ: ತೆಕ್ಕಲಕೋಟೆ ಪಟ್ಟಣದ 10ನೇ ವಾರ್ಡಿನ ಜಡೆ ರೇವಣ್ಣ, ಜಡೆ ಮಲ್ಲಮ್ಮ ಇವರ ವಾಸದ ಕಚ್ಚಾ ಮನೆಯ ಗೋಡೆಯು ಬಿದ್ದಿದೆ. ಮುದ್ದಟನೂರು ಗ್ರಾಮದ ಪಾರ್ವತಮ್ಮ, ಎಂ ಸೂಗೂರು ಗ್ರಾಮದ ನಿರ್ಮಲಮ್ಮ, ಶಾನವಾಸಪುರ ಗ್ರಾಮದ ಸಿದ್ದರಾಮ ಇವರ ವಾಸದ ಮನೆಯು ಕುಸಿದಿದೆ. ಉಪ್ಪಾರ ಹೊಸಳ್ಳಿ ಗ್ರಾಮದ ಪದ್ಮಾವತಿ ಇವರ ವಾಸದ ಮನೆ ಬಿದ್ದಿದೆ ಎಂದು ಗ್ರಾಮ ಆಡಳಿತ ಅಧಿಕಾರಿ ವರದಿ ಸಲ್ಲಿಸಿದ್ದಾರೆ.
ಮಳೆ ವಿವರ : ತೆಕ್ಕಲಕೋಟೆ 2.24 ಸೆಂ.ಮೀ, ಎಂ.ಸೂಗುರು 0.28 ಸೆಂ.ಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.