ಬಳ್ಳಾರಿ: ಅಕಾಲಿಕ ಮಳೆಯಿಂದಾಗಿ ಮೆಣಸಿನಕಾಯಿ ಗಿಡಗಳು ಹಾನಿಯಾಗಿದ್ದರಿಂದ ಮನನೊಂದ ರೈತನೊಬ್ಬ ಕ್ರಿಮಿನಾಶಕ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರುಗೋಡು ತಾಲೂಕು ಬಾದನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಕಳೆದ ವಾರ ಸತತ ಸುರಿದ ಮಳೆಗೆ ಜಿಲ್ಲಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಗಿಡಗಳು ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ನಡೆದರೈತನಆತ್ಮಹತ್ಯೆ ಪ್ರಕರಣ ಇದಾಗಿದೆ. ಸಾಲ- ಸೊಲ ಮಾಡಿ ಮೆಣಸಿನಕಾಯಿ ಬೆಳೆದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಗಾದಿಲಿಂಗ ಅಲಿಯಾಸ್ ದರೂರು( 28)ಎಂದು ಗುರುತಿಸಲಾಗಿದೆ.
ಈತ 5 ಎಕರೆ ಹೊಲವನ್ನುಗುತ್ತಿಗೆ ಪಡೆದು ಮೆಣಸಿನಕಾಯಿ ಬೆಳೆ ಬೆಳೆದಿದ್ದ. ಪ್ರತಿ ಎಕರೆಗೆ ₹1.10 ಲಕ್ಷ ಖರ್ಚು ಮಾಡಿದ್ದ. ಇದಕ್ಕಾಗಿ ₹6 ಲಕ್ಷ ಸಾಲ ಮಾಡಿಕೊಂಡಿದ್ದ. ಮನೆಯನ್ನು ಅಡಮಾನ ವಿಟ್ಟು ₹4 ಲಕ್ಷ, 100 ಕ್ಕೆ 2 ರೂಪಾಯಿಯ ಬಡ್ಡಿ ದರದಂತೆ ₹2 ಲಕ್ಷ ಕೈಗಡ ಸಾಲ ಮಾಡಿದ್ದ. ಗುರುವಾರ ಮಧ್ಯಾಹ್ನ ಹೆಂಡತಿ- ಮಕ್ಕಳ ಜತೆ ಹೊಲಕ್ಕೆ ಹೋಗಿದ್ದ ಗಾದಿಲಿಂಗ ಅವರನ್ನು ಅಲ್ಲಿಯೇ ಬಿಟ್ಟು, ಏಕಾಂಗಿಯಾಗಿ ಮನೆಗೆ ಬಂದು ಕ್ರಿಮಿನಾಶಕ ಸೇವಿಸಿದ್ದ.
ಆತನ ಹಿಂದೆಯೇ ಬಂದ ಪತ್ನಿಗೆ ಕ್ರಿಮಿನಾಶಕ ಸೇವಿಸಿರುವುದಾಗಿ ತಿಳಿಸಿದ್ದ. ಕೂಡಲೇ ಆತನನ್ನು ಕುರುಗೋಡು ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ಕರೆತರಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಮೃತ ಪಟ್ಟಿದ್ದಾರೆ. ಇವರಿಗೆ ಮೂರು ಜನ ಮಕ್ಕಳಿದ್ದಾರೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.