ಬಳ್ಳಾರಿ ಕಾರಾಗೃಹದಲ್ಲಿ ದರ್ಶನ್ –ಸಂಗ್ರಹ ಚಿತ್ರ
ಬಳ್ಳಾರಿ: ‘ದರ್ಶನ್ ಅವರನ್ನು ಬಳ್ಳಾರಿ ಜೈಲಿನಲ್ಲಿ ಇರಿಸುವ ಬಗ್ಗೆ ನಮಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ’ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ ತಿಳಿಸಿದ್ದಾರೆ.
ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ಗೆ ಮಂಜೂರಾಗಿದ್ದ ಜಾಮೀನು ರದ್ದುಪಡಿಸಿ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಪ್ರಕಟಿಸುತ್ತಿದ್ದಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ದರ್ಶನ್ ಅವರನ್ನು ಬಳ್ಳಾರಿ ಜೈಲಿನಲ್ಲಿ ಇರಿಸುವ ಬಗ್ಗೆ ಈ ವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ವಿಷಯದಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಯಾವುದಾದರೂ ಸಿದ್ಧತೆಗಳನ್ನು ಜೈಲಿನಲ್ಲಿ ಆಗಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ದರ್ಶನ್ಗಾಗಿ ಯಾವುದೇ ವಿಶೇಷ ವ್ಯವಸ್ಥೆಗಳು ಆಗಿಲ್ಲ. ಇಲ್ಲಿಗೇ ಕಳುಹಿಸಿದರೂ, ಹಿಂದಿನ ಕೊಠಡಿಯಲ್ಲೇ ಇರಿಸುತ್ತೇವೆ. ಅವರಿಗೆಂದು ಕೊಡಲಾಗಿದ್ದ ಮೆಡಿಕಲ್ ಚೇರ್ ಕೂಡ ಅದೇ ಕೊಠಡಿಯಲ್ಲೇ ಇದೆ’ ಎಂದು ಅವರು ತಿಳಿಸಿದರು.
ಇನ್ನು, ಕಾರಾಗೃಹ ಇಲಾಖೆಯ ಉತ್ತರ ವಲಯದ ಡಿಐಜಿ ಟಿ.ಪಿ.ಶೇಷಾದ್ರಿ ಪ್ರತಿಕ್ರಿಯಿಸಿ, ‘ಕೋರ್ಟ್ ಆದೇಶವನ್ನು ಪರಿಶೀಲಿಸಿದ ಬಳಿಕವೇ ಅವರನ್ನು ಎಲ್ಲಿ ಇರಿಸಬೇಕು ಎಂಬುದು ಸ್ಪಷ್ಟವಾಗಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.