ADVERTISEMENT

ದಾಸೋಹ ಪರಿಕಲ್ಪನೆ ಕೊಟ್ಟವರು ದಾಸಿಮಯ್ಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 12:06 IST
Last Updated 17 ಏಪ್ರಿಲ್ 2021, 12:06 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ಡೀನ್‌ ಕೆ. ರವೀಂದ್ರನಾಥ ಅವರನ್ನು ಕುಲಪತಿ ಪ್ರೊ. ಸ.ಚಿ. ರಮೇಶ, ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಸನ್ಮಾನಿಸಿದರು. ಅಧ್ಯಯನ ಪೀಠದ ಸಂಚಾಲಕ ಗೋವಿಂದ ಇದ್ದಾರೆ
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ಡೀನ್‌ ಕೆ. ರವೀಂದ್ರನಾಥ ಅವರನ್ನು ಕುಲಪತಿ ಪ್ರೊ. ಸ.ಚಿ. ರಮೇಶ, ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಸನ್ಮಾನಿಸಿದರು. ಅಧ್ಯಯನ ಪೀಠದ ಸಂಚಾಲಕ ಗೋವಿಂದ ಇದ್ದಾರೆ   

ಹೊಸಪೇಟೆ (ವಿಜಯನಗರ): ‘ದಾಸೋಹ ಪರಿಕಲ್ಪನೆ ಮೊದಲು ನೀಡಿದವರು ದೇವರ ದಾಸಿಮಯ್ಯನವರು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಲಲಿತ ಕಲಾ ನಿಕಾಯದ ಡೀನ್‌ ಕೆ. ರವೀಂದ್ರನಾಥ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇವರ ದಾಸಿಮಯ್ಯನವರು ಬಸವಣ್ಣನವರಿಗಿಂತ ಮುಂಚೆಯೇ ವರ್ಣಾಶ್ರಮದ ಬಗ್ಗೆ ಮಾತನಾಡಿದವರು. ಆ ಕಾಲದ ವೈರುಧ್ಯಗಳಿಗೆ ಸಾಕ್ಷಿಪ್ರಜ್ಞೆಯಾಗಿ ಬದುಕಿದವರು. ಇವರೊಬ್ಬ ಚಾರಿತ್ರಿಕ ವ್ಯಕ್ತಿ’ ಎಂದರು.

‘ಅವರ ಕಾಲದಲ್ಲಿ ಸಾಮಾಜಿಕ ವ್ಯವಸ್ಥೆ ಭಯಾನಕವಾಗಿತ್ತು. ಶರಣ ಚಳವಳಿ ಬಸವಪೂರ್ವದಲ್ಲೇ ಇತ್ತು. ಸಾಮಾಜಿಕ ಅನಿಷ್ಠಗಳನ್ನು ತಮ್ಮ ವಚನಗಳಲ್ಲಿ ವೈಚಾರಿಕ ಚಿಂತನೆಯ ಮೂಲಕ ಪ್ರಕಟಪಡಿಸಿದರು’ ಎಂದು ತಿಳಿಸಿದರು.

ADVERTISEMENT

ಕುಲಪತಿ ಪ್ರೊ. ಸ.ಚಿ. ರಮೇಶ ಮಾತನಾಡಿ, ‘ದೇವರ ದಾಸಿಮಯ್ಯನವರ ವಚನಗಳು ಸಮಾಜದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಾಮರ್ಥ್ಯ ಹೊಂದಿವೆ. ದಾನ ನೀಡುವುದರ ಹಿಂದೆ ಯಾವುದೇ ಪ್ರತಿಫಲಾಪೇಕ್ಷೆ ಇರಬಾರದು ಎನ್ನುವುದನ್ನು ದಾಸಿಮಯ್ಯ ಆ ಕಾಲದಲ್ಲೇ ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ’ ಎಂದರು.

‘ದೇವರ ದಾಸಿಮಯ್ಯನವರ ವಚನಗಳು ಸಮಾಜದಲ್ಲಿನ ಮೌಢ್ಯ, ಆಚರಣೆ, ಹದಗೆಟ್ಟ ವ್ಯವಸ್ಥೆಯನ್ನು ಕಟುವಾಗಿ ಟೀಕಿಸುತ್ತವೆ. ಅವರ ವಚನಗಳು ಸಮ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿವೆ’ ಎಂದು ತಿಳಿಸಿದರು.

ಕುಲಸಚಿವ ಎ.ಸುಬ್ಬಣ್ಣ ರೈ, ದೇವರ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಗೋವಿಂದ, ಸಂಶೋಧನಾ ವಿದ್ಯಾರ್ಥಿಗಳಾದ ಅಂಜಲಿ, ಸಕ್ಕುಬಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.