ಹೊಸಪೇಟೆ (ವಿಜಯನಗರ): ಎಲ್ಲ ಮಸಣ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆ ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ ಆಗ್ರಹಿಸಿದೆ.
ಈ ಸಂಬಂಧ ಕಾರ್ಮಿಕರ ಸಂಘದವರು ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ಗೆ ಸಲ್ಲಿಸಿ ಒತ್ತಾಯಿಸಿದರು.
ಕುಣಿ ಅಗೆಯುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯ ಅಡಿ ತರಬೇಕು. ಸ್ಥಳೀಯ ಸಂಸ್ಥೆಗಳಿಂದ ಕನಿಷ್ಠ ₹3,000 ಕೂಲಿ ನೀಡಬೇಕು. ಎಲ್ಲ ಮಸಣ ಕಾರ್ಮಿಕರಿಗೆ ಐದು ಎಕರೆ ಕೃಷಿ ಜಮೀನು ಉಚಿತವಾಗಿ ನೀಡಬೇಕು. ನಿವೇಶನ, ಮನೆ ಕೊಡಬೇಕು. ಮಾಸಿಕ ಸಹಾಯ ಧನ, ಪಿಂಚಣಿ ನೀಡಬೇಕು. ಪ್ರತಿಯೊಬ್ಬರಿಗೂ ತಲಾ 10 ಕೆ.ಜಿ. ಆಹಾರ ಧಾನ್ಯ ಕೊಡಬೇಕು. ವರ್ಷದಲ್ಲಿ ಕನಿಷ್ಠ 200 ದಿನ ಉದ್ಯೋಗ ಕೊಡಬೇಕು. ಇಲ್ಲವಾದಲ್ಲಿ ನಿರುದ್ಯೋಗ ಭತ್ಯೆ ಒದಗಿಸಬೇಕು. ಕಾರ್ಮಿಕರ ಎಲ್ಲ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ತಾಲ್ಲೂಕು ಸಂಚಾಲಕ ವೈ.ಎಸ್. ಸ್ವಾಮಿ, ಚಿದಾನಂದ, ಅಂಕ್ಲೇಶ್, ಬಿ. ನಾಗರಾಜ, ರಾಮಪ್ಪ, ಹನುಮಂತ, ಬಸವರಾಜ, ತಾಯಪ್ಪ, ನಾಗಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.