ADVERTISEMENT

ಹೊಸಪೇಟೆ: ಎಲ್ಲ ರೈಲು ಪುನರಾರಂಭಕ್ಕೆ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 11:14 IST
Last Updated 22 ಜುಲೈ 2021, 11:14 IST
ಹೊಸಪೇಟೆ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಳಖೇಡ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಸದಸ್ಯರು ಮನವಿ ಪತ್ರ ಸಲ್ಲಿಸಿದರು
ಹೊಸಪೇಟೆ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಳಖೇಡ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಸದಸ್ಯರು ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಕೋವಿಡ್‌ ಕಾರಣಕ್ಕಾಗಿ ನಿಲ್ಲಿಸಿರುವ ಎಲ್ಲ ರೈಲುಗಳನ್ನು ಪುನರಾರಂಭಿಸಬೇಕೆಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಹಕ್ಕೊತ್ತಾಯ ಮಾಡಿದೆ.

ಬುಧವಾರ ಸಂಜೆ ನಗರದ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಳಖೇಡ ಅವರನ್ನು ಸಮಿತಿಯ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಕೋವಿಡ್‌ನಿಂದ ಹುಬ್ಬಳ್ಳಿ–ತಿರುಪತಿ, ಕೊಲ್ಲಾಪುರ–ಮಣಗೂರು, ಯಶವಂತಪುರ–ವಿಜಯಪುರ ರೈಲುಗಳ ಸಂಚಾರ ನಿಲ್ಲಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಅವುಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಬಳ್ಳಾರಿ–ಕೊಟ್ಟೂರು–ದಾವಣಗೆರೆ ಪ್ರತಿನಿತ್ಯ ಬೆಳಿಗ್ಗೆ ಎರಡೂ ಕಡೆಗಳಿಂದ ರೈಲು ಓಡಿಸಬೇಕು. ಹುಬ್ಬಳ್ಳಿ–ಬಳ್ಳಾರಿ ಪ್ರಯಾಣಿಕರ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸಬೇಕು. ಸೊಲ್ಲಾಪುರ–ವಾಡಿ–ಗದಗ ರೈಲನ್ನು ನಗರದವರೆಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಹಿರಿಯ ನಾಗರಿಕರು, ಪ್ರಯಾಣಿಕರಿಗೆ ನೀಡುತ್ತಿದ್ದ ರಿಯಾಯಿತಿ ಸೌಲಭ್ಯ ಮುಂದುವರೆಸಬೇಕು. ಎಲ್ಲರಿಗೂ ಅನುಕೂಲವಾಗುವಂತೆ ಕೌಂಟರ್‌ಗಳಲ್ಲಿ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡಿತಿನಿ, ಯು.ಅಶ್ವತಪ್ಪ, ಯು.ಆಂಜನೇಯಲು, ಎಚ್.ಎಲ್.ಕೊಟ್ರೇಶಪ್ಪ, ಜಿ.ಸೋಮಣ್ಣ, ಎಂ.ಲೋಗನಾಥನ್, ಎಚ್.ಮಹೇಶ್, ಜಿ.ಕೆ.ಆಚಾರ್, ಕಲ್ಲೇಶ್ ಜೀರ್, ವೈ.ಶೇಖರ್, ಜಾಲಿ ಅರವಿಂದ, ತಿಪ್ಪೇಸ್ವಾಮಿ, ಮೊಹಮ್ಮದ್ ಬಾಷ, ಎಲ್.ಕೆ.ತಾರಾನಾಥ, ಮಹಾಂತೇಶ್, ಐಲಿ ಸಿದ್ದಣ್ಣ, ಹೇಮಯ್ಯ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.