ADVERTISEMENT

ಹೊಸಪೇಟೆ: ದೇವದಾಸಿ ಸಂಘದಿಂದ ವಿಜಯೋತ್ಸವ

ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಿಸಿದ ಸಂಘದ ಕಾರ್ಯಕರ್ತೆಯರು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 9:14 IST
Last Updated 24 ಏಪ್ರಿಲ್ 2019, 9:14 IST
ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಕಾರ್ಯಕರ್ತೆಯರು ಬುಧವಾರ ಹೊಸಪೇಟೆಯ ಶ್ರಮಿಕ ಭವನದ ಎದುರು ವಿಜಯೋತ್ಸವ ಆಚರಿಸಿದರು–ಪ್ರಜಾವಾಣಿ ಚಿತ್ರ
ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಕಾರ್ಯಕರ್ತೆಯರು ಬುಧವಾರ ಹೊಸಪೇಟೆಯ ಶ್ರಮಿಕ ಭವನದ ಎದುರು ವಿಜಯೋತ್ಸವ ಆಚರಿಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತೀರ್ಮಾನ ಕೈಗೊಂಡಿರುವ ವಿಷಯ ತಿಳಿದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಕಾರ್ಯಕರ್ತರು ಬುಧವಾರ ಇಲ್ಲಿನ ಶ್ರಮಿಕ ಭವನದ ಎದುರು ವಿಜಯೋತ್ಸವ ಆಚರಿಸಿದರು.

ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು. ನಂತರ ರಾಜ್ಯ ಸರ್ಕಾರದ ಪರ ಘೋಷಣೆಗಳನ್ನು ಕೂಗಿದರು.

ಸಂಘದ ಜಿಲ್ಲಾ ಅಧ್ಯಕ್ಷೆ ಬಿ. ನಾಗರತ್ನಮ್ಮ ಮಾತನಾಡಿ, ‘ದೇವದಾಸಿ ಮಹಿಳೆಯರು ಹಾಗೂ ಅವರ ಕುಟುಂಬದವರಿಗೆ ನಿವೇಶನ, ಮನೆ ಕಟ್ಟಿಸಿಕೊಡಬೇಕು. ಉಳುಮೆ ಮಾಡಲು ಮೂರು ಎಕರೆ ಜಮೀನು ಕೊಡಬೇಕು. ಅವರ ಮಕ್ಕಳ ಮದುವೆಗೆ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದೆವು. ಕೊನೆಗೂ ಸರ್ಕಾರ ಸ್ಪಂದಿಸಿ ಈ ನಿಟ್ಟಿನಲ್ಲಿ ಆದೇಶ ಹೊರಡಿಸಿರುವುದು ಸಂತಸ ತಂದಿದೆ’ ಎಂದು ಹೇಳಿದರು.

ADVERTISEMENT

‘ದೇವದಾಸಿಯರ ಗಂಡು ಮಕ್ಕಳ ಮದುವೆಗೆ ₹3 ಲಕ್ಷ, ಹೆಣ್ಣು ಮಕ್ಕಳ ಮದುವೆಗೆ ₹5 ಲಕ್ಷ ನೆರವು ನೀಡಲು ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ತೀರ್ಮಾನದಿಂದ ದೇವದಾಸಿ ಮಹಿಳೆಯರ ಮಕ್ಕಳು, ಕುಟುಂಬ ಸದಸ್ಯರು ಮುಖ್ಯವಾಹಿನಿಗೆ ಬರಲು ಸಹಾಯವಾಗುತ್ತದೆ’ ಎಂದು ತಿಳಿಸಿದರು.

ಸಂಘದ ತಾಲ್ಲೂಕು ಅಧ್ಯಕ್ಷೆ ಹಂಪಮ್ಮ, ಕಾರ್ಯದರ್ಶಿ ಯಲ್ಲಮ್ಮ, ದೇವಿಕಾ, ವೆಂಕಮ್ಮ, ಎಂ. ಗೋಪಾಲ, ಭಾಸ್ಕರ್‌ ರೆಡ್ಡಿ, ಶರಣು, ಶಿವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.