ADVERTISEMENT

‘ವಿಜಯನಗರ ಜಿಲ್ಲೆಗೆ ವಿರೋಧ ಸಲ್ಲದು’

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 14:07 IST
Last Updated 29 ಸೆಪ್ಟೆಂಬರ್ 2019, 14:07 IST

ಹೊಸಪೇಟೆ: ‘ವೈಯಕ್ತಿಕ ಹಿತಾಸಕ್ತಿಗಾಗಿ ರಾಜಕೀಯ ಮುಖಂಡರು ವಿಜಯನಗರ ಜಿಲ್ಲೆ ರಚನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ’ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ದುರುಗಪ್ಪ ಪೂಜಾರ ತಿಳಿಸಿದ್ದಾರೆ.

ಈ ಕುರಿತು ಭಾನುವಾರ ಪ್ರಕಟಣೆ ಹೊರಡಿಸಿರುವ ಅವರು, ‘ಬಳ್ಳಾರಿ ಜಿಲ್ಲಾ ಕೇಂದ್ರದಿಂದ ದೂರವಿರುವ ಪಶ್ಚಿಮ ತಾಲ್ಲೂಕುಗಳ ಜನ ಏನೆಲ್ಲ ಕಷ್ಟ ಅನುಭವಿಸುತ್ತಿದ್ದಾರೆ ಎನ್ನುವುದು ಶಾಸಕ ಜಿ. ಸೋಮಶೇಖರ್‌ ರೆಡ್ಡಿ ಅವರಿಗೆ ಗೊತ್ತು. ಆದರೆ, ರಾಜಕೀಯಕ್ಕಾಗಿ ವಿರೋಧಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ ಅವರಿಗೆ ವಿಶಾಲ ಜಿಲ್ಲೆ ಪ್ರಾತಿನಿಧ್ಯ ಕೈತಪ್ಪುವ ಭೀತಿ. ರೈತ ಮುಖಂಡ ದರೂರು ಪುರುಷೋತ್ತಮಗೌಡ ಅವರಿಗೆ ತುಂಗಭದ್ರಾ ಹೂಳಿನ ಪ್ರೀತಿಯಿಂದಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಹೊರತು ಯಾವುದೇ ತಾರ್ಕಿಕ ಕಾರಣಗಳನ್ನು ಅವರು ಕೊಟ್ಟಿಲ್ಲ’ ಎಂದಿದ್ದಾರೆ.

‘ಜಿಲ್ಲೆಯ ಎಲ್ಲಾ ಪಶ್ಚಿಮ ತಾಲ್ಲೂಕುಗಳು ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಹಿಂದುಳಿದಿವೆ. ಬಳ್ಳಾರಿ ಜಿಲ್ಲಾ ಕೇಂದ್ರ ಬಹಳ ದೂರದಲ್ಲಿದೆ. ಹೀಗಾಗಿ ಹೊಸ ಜಿಲ್ಲೆ ರಚಿಸುವುದು ಉತ್ತಮ. ದಶಕದ ಹಿಂದೆಯೇ ವಿಜಯನಗರ ಜಿಲ್ಲೆಯ ಉದಯವಾಗಬೇಕಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಅದು ಆಗಲಿಲ್ಲ. ಈಗ ಅದಕ್ಕೆ ಕಾಲ ಕೂಡಿ ಬಂದಿದ್ದು, ಅದರ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.