
ಜೈಲು (ಪ್ರಾತಿನಿಧಿಕ ಚಿತ್ರ)
ಹೂವಿನಹಡಗಲಿ: ವರದಕ್ಷಿಣೆ ಕಿರುಕುಳ ನೀಡಿ ಮೊದಲ ಪತ್ನಿಯನ್ನು ದೂರವಾಗಿಸಿ, ಎರಡನೇ ಮದುವೆಯಾದ ಕೊಮಾರನಹಳ್ಳಿ ತಾಂಡಾದ ಆರೋಪಿ, ರಾಣೆಬೆನ್ನೂರು ಸಾರಿಗೆ ಘಟಕದಲ್ಲಿ ನಿರ್ವಾಹಕನಾಗಿರುವ ರವಿ ನಾಯ್ಕನಿಗೆ ಇಲ್ಲಿನ ಜೆಎಂಎಫ್ ಸಿ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಕೊಮಾರನಹಳ್ಳಿ ತಾಂಡಾದ ಆರೋಪಿ ರವಿ ನಾಯ್ಕ ದಾಸರಹಳ್ಳಿ ತಾಂಡಾದ ಆಶಾಬಾಯಿಯನ್ನು 2010ರಲ್ಲಿ ಮದುವೆಯಾಗಿದ್ದ. ವರದಕ್ಷಿಣೆ ಕಿರುಕುಳ ನೀಡಿ ಆಕೆಯಿಂದ ದೂರವಾಗಿ ಸ್ವಗ್ರಾಮದಲ್ಲಿ ಎರಡನೇ ಮದುವೆಯಾಗಿದ್ದ. ಈ ಕುರಿತು ಮೊದಲ ಪತ್ನಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ನ್ಯಾಯಾಲಯದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದರಿಂದ ನ್ಯಾಯಾಧೀಶರಾದ ಟಿ.ಅಕ್ಷತಾ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. ಆರೋಪಿ ರವಿ ನಾಯ್ಕನಿಗೆ 6 ತಿಂಗಳು ಸಾದಾ ಜೈಲು ಶಿಕ್ಷೆ, ₹10 ಸಾವಿರ ದಂಡ , ದಂಡ ಪಾವತಿಸದಿದ್ದಲ್ಲಿ 3 ತಿಂಗಳು ಸಾದಾ ಜೈಲು, ವರದಕ್ಷಿಣೆ ನಿಷೇಧ ಕಾಯ್ದೆಯ ವಿವಿಧ ಕಲಂಗಳಡಿ ಒಟ್ಟು ₹30 ಸಾವಿರ ದಂಡ ವಿಧಿಸಲಾಗಿದೆ. ಆರೋಪಿಯ ತಾಯಿ ಲಕ್ಷ್ಮಿಬಾಯಿಗೆ ₹20 ಸಾವಿರ ದಂಡ ತಪ್ಪಿದಲ್ಲಿ 3 ತಿಂಗಳು, ಜೈಲು, ಆರೋಪಿಯ ಸಹೋದರ ಲಾವಾನಾಯ್ಕ, 2ನೇ ಪತ್ನಿಯ ತಂದೆತಾಯಿಯಾದ ಮಂಗ್ಲನಾಯ್ಕ, ರೇವಣಿಬಾಯಿ ಅವರಿಗೆ ತಲಾ ₹500 ದಂಡ, ತಪ್ಪಿದಲ್ಲಿ 20 ದಿನ ಜೈಲು ಶಿಕ್ಷೆ ವಿಧಿಸಿದೆ. ದಂಡದ ಮೊತ್ತ ₹50 ಸಾವಿರ ಮೊದಲ ಪತ್ನಿ ಆಶಾಬಾಯಿಗೆ ಪರಿಹಾರ ನೀಡಲು ನ್ಯಾಯಾಲಯ ಸೂಚಿಸಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಅಜ್ಜಯ್ಯ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.