ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಶುಕ್ರವಾರ ಈದ್–ಉಲ್–ಫಿತ್ರ್ ಅನ್ನು ಸರಳವಾಗಿ ಆಚರಿಸಲಾಯಿತು.
ಕೋವಿಡ್–19 ವ್ಯಾಪಕವಾಗಿ ಹೆಚ್ಚಾಗುತ್ತಿರುವುದರಿಂದ ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ಎಲ್ಲ ಈದ್ಗಾ ಮೈದಾನಗಳ ಪ್ರವೇಶ ದ್ವಾರ ಮುಚ್ಚಲಾಗಿತ್ತು. ಮಸೀದಿಗಳಲ್ಲಿ ಮೌಲ್ವಿಗಳು ಸಾಂಕೇತಿಕವಾಗಿ ಪ್ರಾರ್ಥನೆ ನೆರವೇರಿಸಿದರು. ಮುಸ್ಲಿಂರು ಅವರವರ ಮನೆಗಳಲ್ಲೇ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಭೋಜನ ಸವಿದರು.
‘ಕೋವಿಡ್ ಇರುವುದರಿಂದ ಯಾರೂ ಗುಂಪು ಗೂಡಬಾರದು. ಮನೆಗಳಲ್ಲೇ ಹಬ್ಬ ಆಚರಿಸಬೇಕು’ ಎಂದು ಮುಸ್ಲಿಂ ಧರ್ಮಗುರುಗಳು ಮನವಿ ಮಾಡಿಕೊಂಡಿದ್ದರಿಂದ ಯಾರೊಬ್ಬರೂ ಈದ್ಗಾಗಳ ಕಡೆಗೆ ಸುಳಿಯಲಿಲ್ಲ. ಎಲ್ಲ ಈದ್ಗಾ ಮೈದಾನಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಕೆಲವರು ಅವರ ಬಡಾವಣೆಯಲ್ಲಿ ಬಡವರು, ಭಿಕ್ಷುಕರಿಗೆ ಹಣ್ಣು ವಿತರಿಸಿದರು. ಮತ್ತೆ ಕೆಲವರು ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಗುಲಾಬಿ ಹೂ ಕೊಟ್ಟು ಶುಭ ಕೋರಿದರು. ಗ್ರಾಮೀಣ ಭಾಗಗಳಲ್ಲೂ ಮನೆಗಳಿಗಷ್ಟೇ ಹಬ್ಬ ಸೀಮಿತವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.