ADVERTISEMENT

ಆನೆ ದಾಳಿ; ಆಕ್ರಂದನದ ನಡುವೆ ಬೋರಮ್ಮಳ ಅಂತ್ಯಕ್ರಿಯೆ

ಗ್ರಾಮದಲ್ಲಿ ಮಡುಗಟ್ಟಿದ ದುಃಖ, ಕುಟುಂಬಸ್ಥರ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 4:31 IST
Last Updated 24 ಫೆಬ್ರುವರಿ 2026, 4:31 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಗೆಟ್ಟಿ ಚಿತ್ರ

ಕೂಡ್ಲಿಗಿ: ಚಿಕ್ಕಮಗಳೂರು ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಹ್ಯಾರಂಬಿಪುರ ಗ್ರಾಮದ ಬಳಿಯ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆನೆ ದಾಳಿಯಿಂದ ಭಾನುವಾರ ಮೃತಪಟ್ಟಿದ್ದ ಬಿ. ಬೋರಮ್ಮ ಅವರ ಮೃತ ದೇಹವನ್ನು ಸೋಮವಾರ ಬೆಳಿಗ್ಗೆ ಅವರ ಸ್ವಗ್ರಾಮ ತಾಲ್ಲೂಕಿನ ಗೆದ್ದಲಗಟ್ಟೆ ಕಾಮಯ್ಯನಹಟ್ಟಿಗೆ ತರಲಾಯಿತು. ಬೋರಮ್ಮನ ಮೃತ ದೇಹ ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿ, ಗ್ರಾಮದಲ್ಲಿ ದುಃಖ ಮಡುಗಟ್ಟಿತ್ತು.

ADVERTISEMENT

ಸಾಲ ಮಾಡಿ ಕಟ್ಟಿಸಿದ್ದ ಮನೆಗೆ ಎರಡು ತಿಂಗಳ ಹಿಂದೆಯಷ್ಟೇ ಬೋರಮ್ಮನ ಕುಟುಂಬ ಪ್ರವೇಶ ಮಾಡಿತ್ತು. ಹನ್ನೆರಡು ದಿನಗಳ ಹಿಂದೆ ಗ್ರಾಮದಲ್ಲಿ ಜಾತ್ರೆ ಮುಗಿಸಿಕೊಂಡು ಬೋರಮ್ಮ ಕೂಲಿ ಕೆಲಸಕ್ಕೆ ಹೋಗಿದ್ದರು. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆನೆ ದಾಳಿಗೆ ಸಿಲುಕಿ ಮೃತಪಟ್ಟರು.

ಬೋರಮ್ಮನ ಮೃತ ದೇಹ ಗ್ರಾಮಕ್ಕೆ ಬರುತ್ತಿದ್ದಂತೆ ಮೃತರ ಮನೆಗೆ ಭೇಟಿ ನೀಡಿದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸಂತೈಸುವ ಕೆಲಸ ಮಾಡಿದರು.

ನಂತರ ಮಾತನಾಡಿದ ಅವರು, ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಬೋರಮ್ಮ ಕಾಡಾನೆ ದಾಳಿಗೆ ಬಲಿಯಾಗಿರುವುದು ದುರಂತ. ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ಅಲ್ಲಿನ ಡಿಸಿಎಫ್, ಸಿಸಿಎಫ್ ಹಾಗೂ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರೊಂದಿಗೆ ಮಾತನಾಡಿದೆ. ಈಗಾಗಲೇ ₹20 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಹೆಚ್ಚಿನ ಪರಿಹಾರ ನೀಡಲು ಕೋರುವೆ ಎಂದು ಹೇಳಿದರು.

ಆನೆ ಬರ್ತಾವೆ ಅಂತ ಅರಣ್ಯ ಇಲಾಖೆಯವರು ಹೇಳಿದ್ದರೂ ತೋಟದ ಮಾಲೀಕರು ಕಾರ್ಮಿಕರನ್ನು ಕೆಲಸಕ್ಕೆ ಕಳಿಸಿದ್ದಾರೆ. ನಾವು ನಿನ್ನೆ ಅಲ್ಲಿಗೆ ಹೋದಾಗ ನಮಗೆ ಸರಿಯಾಗಿ ಸ್ಪಂದಿಸದೆ ಹಾರಿಕೆ ಉತ್ತರಗಳನ್ನು ನೀಡಿದರು. ಅರಣ್ಯ ಇಲಾಖೆ ಹೇಳಿದ್ದರೂ, ಕಾರ್ಮಿಕರನ್ನು ಕೆಲಸಕ್ಕೆ ಕಳಿಸಿದ ಮಾಲೀಕರೇ ನಮ್ಮ ಮಹಿಳೆಯ ಸಾವಿಗೆ ಕಾರಣವಾಗಿದ್ದಾರೆ. ಅವರ ವಿರುದ್ದ ಪ್ರಕರಣ ಕೈಗೊಳ್ಳಬೇಕು ಎಂದು ಬೋರಮ್ಮ ಅವರ ಸಂಬಂಧಿ ಜಾತಪ್ಪ ಒತ್ತಾಯಿಸಿದರು.

ಬೋರಮ್ಮನ ಅಂತ್ಯಕ್ರಿಯೆ: ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ತಾಲ್ಲೂಕಿನ ಗೆದ್ದಲಗಟ್ಟೆ ಕಾಮಯ್ಯನಹಟ್ಟಿ ಗ್ರಾಮದ ಬೋರಮ್ಮ ಅವರ ಅಂತ್ಯಕ್ರಿಯೆಯನ್ನು ಸೋಮವಾರ ಗ್ರಾಮದ ಹೊರವಲಯದಲ್ಲಿರುವ ವಾಲ್ಮೀಕಿ ಸಮುದಾಯದ ರುದ್ರಭೂಮಿಯಲ್ಲಿ ವಾಲ್ಮೀಕಿ ಸಮುದಾಯದ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಬೋರಮ್ಮನ ಪುತ್ರ ಸುರೇಶ್ ಅಗ್ನಿಸ್ಪರ್ಶ ಮಾಡಿದರು. ಮೃತರಿಗೆ ಪತಿ, ಇಬ್ಬರು ಪುತ್ರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.