ADVERTISEMENT

ತೋಟಗಾರಿಕೆಯಲ್ಲಿ ಯಶಸ್ಸು ಕಂಡ ರೈತ

ಸಿ.ಶಿವಾನಂದ
Published 11 ನವೆಂಬರ್ 2019, 19:30 IST
Last Updated 11 ನವೆಂಬರ್ 2019, 19:30 IST
ತನ್ನ ಹೊಲದಲ್ಲಿ ಬೆಳೆದಿರುವ ಹೂಕೋಸು ತೋರಿಸುತ್ತಿರುವ ರೈತ ಡಿ. ಸುರೇಶ್‌
ತನ್ನ ಹೊಲದಲ್ಲಿ ಬೆಳೆದಿರುವ ಹೂಕೋಸು ತೋರಿಸುತ್ತಿರುವ ರೈತ ಡಿ. ಸುರೇಶ್‌   

ಹಗರಿಬೊಮ್ಮನಹಳ್ಳಿ:ಭತ್ತಕ್ಕೆ ಸೀಮಿತವಾಗಿದ್ದ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದು ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದಾರೆ ತಾಲ್ಲೂಕಿನ ಹಳೆ ಹಗರಿಬೊಮ್ಮನಹಳ್ಳಿಯ ಡಿ. ಸುರೇಶ್‌.

ನಾಲ್ಕು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ, ಸೌತೆಕಾಯಿ, ಎಲೆಕೋಸು, ಹಿರೇಕಾಯಿ, ಟೊಮೆಟೊ, ಬೀಟ್‌ರೂಟ್‌ ಬೆಳೆದು ಕೈತುಂಬ ಹಣ ಗಳಿಸುತ್ತಿದ್ದಾರೆ.

ಜಮೀನಿನ ಮಾಲೀಕರಿಗೆ ಪ್ರತಿ ಎಕರೆಗೆ ವಾರ್ಷಿಕ ₹30,000 ಪಾವತಿಸುತ್ತಿದ್ದಾರೆ. ಈ ಹಿಂದೆ ನಾಲ್ಕು ಎಕರೆಯಲ್ಲಿ ಭತ್ತವಷ್ಟೇ ಬೆಳೆಯುತ್ತಿದ್ದರು. ಅದರಿಂದ ಯಾವುದೇ ರೀತಿಯ ಲಾಭ ಅವರ ಕೈಸೇರುತ್ತಿರಲಿಲ್ಲ. ಹೀಗಾಗಿ ತೋಟಗಾರಿಕೆ ಬೆಳೆಗಳತ್ತ ಮುಖ ಮಾಡಿ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದ್ದಾರೆ. ಒಂದೇ ಕೊಳವೆಬಾವಿಯಲ್ಲಿ ಅಲ್ಪ ನೀರಿದ್ದು, ತೋಟಗಾರಿಕೆ ಬೆಳೆಗಳಿಗೆ ಅದರಿಂದಲೇ ಪೂರೈಸುತ್ತಿದ್ದಾರೆ. ಅಷ್ಟೇ ಅಲ್ಲ, ಇಡೀ ಹೊಲಕ್ಕೆ ಸಾವಯವ ಗೊಬ್ಬರ ಹಾಕುತ್ತಿದ್ದಾರೆ.

ADVERTISEMENT

‘ಭತ್ತ ಬೆಳೆಯಬೇಕಾದರೆ ಯಥೇಚ್ಛ ನೀರು ಬೇಕು. ತೋಟಗಾರಿಕೆ ಬೆಳೆಗಳು ಹಾಗಲ್ಲ. ಸ್ವಲ್ಪ ನೀರಿನಲ್ಲಿಯೇ ಬೆಳೆಯಬಹುದು. ರಸಾಯನಿಕಗಳ ಮೊರೆ ಹೋಗದೆ ಸಾವಯವ ಗೊಬ್ಬರ ಹಾಕುತ್ತಿದ್ದು, ಒಳ್ಳೆಯ ಫಸಲು ಬರುತ್ತಿದೆ’ ಎಂದು ರೈತ ಸುರೇಶ್‌ ಹೇಳಿದರು.

ರೋಗಾಣು, ಕೀಟಗಳ ನಿಯಂತ್ರಣಕ್ಕೆ ಜಮೀನಿನ ಹಲವು ಕಡೆಗಳಲ್ಲಿ ಹಳದಿ ಸ್ಟಿಕ್ಕರ್ಸ್‌ಗಳನ್ನು ಹಚ್ಚಿದ್ದಾರೆ. ಗಿಡಗಳ ನಾಟಿ, ಗುತ್ತಿಗೆ ಹಣ, ಔಷಧೋಪಚಾರಕ್ಕೆ ₹1 ಲಕ್ಷ ಖರ್ಚು ಮಾಡಿದ್ದಾರೆ. ಮೂರು ತಿಂಗಳಲ್ಲಿ ಉತ್ತಮ ಇಳುವರಿ ಬಂದಿದ್ದು, ಮೂರು ಪಟ್ಟು ಲಾಭ ಗಳಿಸಿದ್ದಾರೆ.

ಸಗಟು ತರಕಾರಿ ಖರೀದಿದಾರರು ಜಮೀನಿಗೆ ನೇರವಾಗಿ ಬಂದು ಖರೀದಿಸಿ, ತೂಕವಾದ ಬಳಿಕ ಸ್ಥಳದಲ್ಲೇ ಹಣ ನೀಡುತ್ತಿದ್ದಾರೆ. ಇದುವರೆಗೆ ಮಾರುಕಟ್ಟೆಯ ಸಮಸ್ಯೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.