ಕಂಪ್ಲಿ: ‘ರೈತ ಮತ್ತು ಸೈನಿಕರು ದೇಶದ ಬೆನ್ನೆಲುಬು ಇದ್ದಂತೆ. ಇವರನ್ನು ಆದರಿಸುವುದು ಎಲ್ಲರ ಆದ್ಯ ಕರ್ತವ್ಯ’ ಎಂದು ಎಮ್ಮಿಗನೂರಿನ ಹಂಪಿಸಾವಿರ ಮಠದ ವಾಮದೇವ ಮಹಾಂತ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಹಂಪಿಸಾವಿರ ದೇವರ ಮಹಾಂತರ ಮಠದಲ್ಲಿ ಲಿಂಗೈಕ್ಯ ಸಿದ್ಧಲಿಂಗ ಮಹಾಂತ ಶಿವಾಚಾರ್ಯರ 24ನೇ ಸಂಸ್ಮರಣೋತ್ಸವ ಅಂಗವಾಗಿ ನಡೆದ ರೈತ, ಸೈನಿಕ, ಮಠಾಧೀಶರ ತುಲಾಭಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಸೈನಿಕರು ದೇಶದ ಗಡಿ ಸಂರಕ್ಷಿಸಿದರೆ, ರೈತರು ನಮ್ಮೆಲ್ಲರ ಹೊಟ್ಟೆ ತುಂಬಿಸುತ್ತಾರೆ. ಇವರಿಬ್ಬರ ಪರಿಶ್ರಮದಿಂದ ದೇಶದ ಜನತೆ ಶಾಂತಿ, ನೆಮ್ಮದಿ, ಸಂತೃಪ್ತಿಯಿಂದ ಬಾಳಲು ಸಾಧ್ಯವಾಗಿದೆ’ ಎಂದರು.
‘ರೈತನಿಗೆ ಕೇವಲ ಗೊಬ್ಬರ, ಬೀಜ ಒದಗಿಸಿದರೆ ಸಾಲದು, ಅವರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸಕಾಲಕ್ಕೆ ಯೋಗ್ಯ ಬೆಲೆ ದೊರೆಯುವಂತಾಗಬೇಕು’ ಎಂದು ಹೇಳಿದರು.
ಇದಕ್ಕೂ ಮುನ್ನ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ಮತ್ತು ಶಿವಶಕ್ತಿ ಅಕ್ಕನ ಬಳಗಕ್ಕೆ ಚಾಲನೆ ನೀಡಲಾಯಿತು.
ಕೃಷಿ ಸೇವೆಗೆ ಶಾಲಿಗನೂರು ರೈತ ಶ್ರೀನಿವಾಸ ತಿಪ್ಪಣ್ಣ ವಡ್ಡರ, ದೇಶಸೇವೆಗೆ ಮಾಜಿ ಯೋಧ ಎಮ್ಮಿಗನೂರಿನ ಶೇಖ್ಸಾಬ್, ಈಶ ಸೇವೆಗೆ ಚೌಡಯ್ಯದಾನಪುರದ ಚಿತ್ರಶೇಖರ ಶಿವಾಚಾರ್ಯರನ್ನು ಗೌರವಿಸಲಾಯಿತು.
ಬೆಂಗಳೂರಿನ ವಿಮಲ ರೇಣುಕ ವೀರಮುಕ್ತಿ ಶಿವಾಚಾರ್ಯರು, ಉರವಕೊಂಡ ಕರಿಬಸವರಾಜೇಂದ್ರ ಸ್ವಾಮೀಜಿ, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯರನ್ನು ಶ್ರೀಮಠದಿಂದ ತುಲಾಭಾರ ಮತ್ತು ವಾಮದೇವ ಶಿವಾಚಾರ್ಯರಿಗೆ ಭಕ್ತರು ತುಲಾಭಾರ ನೆರವೇರಿಸಿದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಗಾಲಿ ಸೋಮಶೇಖರರೆಡ್ಡಿ, ಪ್ರಮುಖರಾದ ಹರ್ಲಾಪುರದ ಮಲ್ಲಿಕಾರ್ಜುನ, ಮಸೀದಿಪುರದ ಚಂದ್ರಶೇಖರಗೌಡ, ಎಸ್. ಮಲ್ಲನಗೌಡ, ರಾಜಶೇಖರಗೌಡ, ಬಿ. ಸದಾಶಿವಪ್ಪ, ವಿವಿಧ ಮಠಾಧೀಶರು, ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.