
ಸಂಡೂರು: ‘ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದ ಗ್ರಾಮೀಣ ಪ್ರದೇಶದ ಜನಪ್ರಿಯ ಕಲೆಗಳಾದ ಡೊಳ್ಳು, ಬಯಲಾಟ ಸೇರಿದಂತೆ ಇತರೆ ಕಲೆಗಳನ್ನು ಸಾರ್ವಜನಿಕ ಪ್ರೋತ್ಸಾಹಿಸಬೇಕು’ ಎಂದು ರಂಗನೇಸರ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಹೇಳಿದರು.
ತಾಲ್ಲೂಕಿನ ಎಂ.ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ರಂಗನೇಸರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಡೊಳ್ಳು ಕುಣಿತ ತರಬೇತಿ ಕಾರ್ಯಗಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಜನಪದ ಕಲೆಗಳು ನಶಿಸಿ ಮೂಲೆ ಗುಂಪಾಗಿದ್ದು, ಕಲೆಗಳಿಗೆ ಮರು ಜೀವ ತುಂಬುವ, ಪ್ರೋತ್ಸಾಹ ಕಲ್ಪಿಸುವ ದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ರೈತಾಪಿ ಮಕ್ಕಳಿಗೆ ನಿರಂತರವಾಗಿ ತರಬೇತಿ ನೀಡಲಾಗುತ್ತಿದೆ’ ಎಂದರು.
ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಿವಲಿಂಗಪ್ಪ ಮಾತನಾಡಿ, ‘ಜಾನಪದ ಗೀತೆ, ಲಾವಣಿ, ನಾಟಕ, ನೃತ್ಯ, ಪುರಾಣ ಕಥೆಗಳು ಸೇರಿದಂತೆ ಇತರೆ ಗ್ರಾಮೀಣ ಸೊಗಡಿನ ಕಲೆಗಳು ಅವನತಿಯ ಅಂಚಿಗೆ ತಲುಪಿದ್ದು, ಇಂತಹ ಕಲೆಗಳನ್ನು ಯುವಜನರಲ್ಲಿ ಬಿತ್ತುವ ಕೆಲಸವನ್ನು ರಂಗನೇಸರ ಸಾಂಸ್ಕೃತಿಕ ಕಲಾ ಸಂಘದವರು ಮಾಡುತ್ತಿರುವುದು ಸಂತಸದ ವಿಚಾರ’ ಎಂದರು
ರಂಗನೇಸರ ಸಾಂಸ್ಕೃತಿಕ ಕಲಾ ಸಂಘದ ಉಪಾಧ್ಯಕ್ಷ ಮುರುಣ್ಣೆ ಶಿಲಪ್ಪ, ಮುಖಂಡರಾದ ಹನುಮಂತರೆಡ್ಡಿ, ಪ್ರವೀಣ್ ಕುಮಾರ್, ಯಲ್ಲಪ್ಪ ಶಾಲೆಯ ಶಿಕ್ಷಕರು, ಮಕ್ಕಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.