ಬಳ್ಳಾರಿ: ನಗರದಲ್ಲಿ ದಿನವಿಡೀ ತುಂತುರು ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಮಳೆ ಸತತ ಸಂಜೆವರೆಗೂ ತುಂತುರಾಗಿ ಸುರಿಯಿತು, ದಟ್ಟ ಮೋಡಗಳು ಕವಿದ ವಾತಾವರಣ, ಚಳಿಗಾಳಿಯೂ ಇದ್ದುದರಿಂದ ಬಹುತೇಕರು ಜರ್ಕಿನ್, ಸ್ವೆಟರ್ಗಳನ್ನು ಧರಿಸಿ ಸಂಚರಿಸಿದರು, ಸಂಚಾರ ನಿಯಂತ್ರಣ ಕಾನ್ಸ್ಟೆಬಲ್ಗಳು ಛತ್ರಿ ಹಿಡಿದು ವಾಹನ ಸಂಚಾರವನ್ನು ನಿಯಂತ್ರಿಸಿದ್ದು ಗಮನ ಸೆಳೆಯಿತು.
ಸಣ್ಣ ಪುಟ್ಟ ಹಳ್ಳಗಳಲ್ಲಿ ನೀರು ತುಂಬಿಕೊಂಡ ಪರಿಣಾಮವಾಗಿ ಹಲವೆಡೆ ಜನ–ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ನಗರದ ಗಡಿಗಿ ಚೆನ್ನಪ್ಪ ವೃತ್ತ, ದುರ್ಗಮ್ಮ ಗುಡಿ ವೃತ್ತ, ಎಚ್.ಆರ್.ಗವಿಯಪ್ಪ ವೃತ್ತ, ಎಸ್ಪಿ ವೃತ್ತ ಸೇರಿದಂತೆ ಹಲವೆಡೆ ವಾಹನ ದಟ್ಟಣೆಯೂ ಹೆಚ್ಚಿತ್ತು.
ಸಂಜೆಯಾದರೂ ಮಳೆ ಬಿಡದೆ ಸುರಿಯುತ್ತಿದ್ದುದರಿಂದ ನೂರಾರು ವಿದ್ಯಾರ್ಥಿಗಳು ನೆನೆಯುತ್ತಲೇ ಮನೆ, ಬಸ್ ನಿಲ್ದಾಣಗಳ ಕಡೆಗೆ ಹೆಜ್ಜೆ ಹಾಕಿದರು. ರಸ್ತೆ ಬದಿ ವ್ಯಾಪಾರಿಗಳು ಮಳೆಯಿಂದ ಹೆಚ್ಚು ತೊಂದರೆ ಅನುಭವಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.