ಹೊಸಪೇಟೆ: ಗುರು ಪೂರ್ಣಿಮೆ ಪ್ರಯುಕ್ತ ಇಲ್ಲಿನ ಟಿ.ಬಿ. ಡ್ಯಾಂ ರಸ್ತೆಯಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಾಯಿಬಾಬಾ ಅವರ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ, ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿದರು. ದೇಗುಲದ ಆವರಣದಲ್ಲಿ ಪಲ್ಲಕ್ಕಿ ಸೇವೆ, ರಥೋತ್ಸವ ಜರುಗಿತು.
ವಿವಿಧ ಕಡೆಗಳಿಂದ ಬಂದಿದ್ದ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವರಿಗೆ ಹೂ, ಹಣ್ಣು, ನೈವೇದ್ಯ ಸಮರ್ಪಿಸಿದರು. ತೇರು ಎಳೆದು ಧನ್ಯತೆ ಮೆರೆದರು.
ಭಕ್ತರಿಗಾಗಿ ದೇವಸ್ಥಾನದಲ್ಲಿ ಅನ್ನ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಬಡಾವಣೆಗಳಿಂದ ಜನ ಬಂದದ್ದರಿಂದ ದಿನವಿಡೀ ದೇಗುಲದಲ್ಲಿ ಜನದಟ್ಟಣೆ ಕಂಡು ಬಂತು. ದೇಗುಲ ಮುಂಭಾಗದ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ದೇವಸ್ಥಾನಕ್ಕೆ ವಿದ್ಯುದ್ದೀಪ, ಹೂಗಳಿಂದ ಅಲಂಕರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.