ಹೊಸಪೇಟೆ: ಬಳ್ಳಾರಿ ಜಿಲ್ಲಾಡಳಿತವು ನ. 13ರಂದು ಒಂದೇ ದಿನ ‘ಹಂಪಿ ಉತ್ಸವ’ ಆಚರಿಸಲು ಬುಧವಾರ ತೀರ್ಮಾನಿಸಿದೆ.
ನ. 13ರಂದು ಸಂಜೆ ಹಂಪಿ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ವಿರೂಪಾಕ್ಷ ದೇಗುಲದ ವರೆಗೆ ಮೆರವಣಿಗೆ ನಡೆಯಲಿದೆ. ಜಂಬೂ ಸವಾರಿ ಮಾದರಿಯಲ್ಲಿ ಅಲಂಕರಿಸಿದ ಆನೆಗಳ ಮೆರವಣಿಗೆ ಜರುಗಲಿದೆ. ಜಿಲ್ಲೆಯ ಪ್ರತಿ ತಾಲ್ಲೂಕಿನ ಎರಡು ಕಲಾ ತಂಡಗಳು ಪಾಲ್ಗೊಳ್ಳಲಿವೆ. ಮೆರವಣಿಗೆ ಮುಗಿದ ನಂತರ ತುಂಗಭದ್ರಾ ನದಿ ತಟದಲ್ಲಿ ತುಂಗಾ ಆರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
‘ನ.13ಕ್ಕೆ ಹಂಪಿ ಉತ್ಸವ’ದ ದಿನಾಂಕ ನಿಗದಿಯಾಗಿದೆ. ಗುರುವಾರ ಅಥವಾ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಅಧಿಕೃತವಾಗಿ ದಿನಾಂಕ ಘೋಷಿಸುವರು’ ಎಂದು ಹೆಸರು ಹೇಳಲಿಚ್ಛಿಸಿದ ಹಿರಿಯ ಅಧಿಕಾರಿ ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.
ಪ್ರತಿ ವರ್ಷದಂತೆ ಮೂರು ದಿನ ‘ಹಂಪಿ ಉತ್ಸವ’ ಆಚರಿಸಬೇಕೆಂದು ಜಿಲ್ಲೆಯ ಹಲವು ಸಂಘಟನೆಗಳು ಆಗ್ರಹಿಸಿದ್ದವು. ಆದರೆ, ಕೋವಿಡ್–19 ಕಾರಣಕ್ಕಾಗಿ ಜಿಲ್ಲಾಡಳಿತ ಒಂದು ದಿನ ಸಾಂಕೇತಿಕವಾಗಿ ಕಾರ್ಯಕ್ರಮ ಆಚರಿಸಲು ತೀರ್ಮಾನ ತೆಗೆದುಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.