ಹೊಸಪೇಟೆ: ಇಲ್ಲಿಗೆ ಸಮೀಪದ ತುಂಗಭದ್ರಾ ಜಲಾಶಯದ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದು, ನದಿ ಪಾತ್ರದ ಜನ ಎಚ್ಚರದಿಂದ ಇರಬೇಕು ಎಂದು ಆಡಳಿತ ಮಂಡಳಿ ತಿಳಿಸಿದೆ.
‘ಶಿವಮೊಗ್ಗದ ತುಂಗಾ ಮತ್ತು ಭದ್ರಾ ಜಲಾಶಯಗಳೆರಡೂ ಸಂಪೂರ್ಣ ಭರ್ತಿಯಾಗಿದ್ದು, ನದಿಗೆ ಅಪಾರ ನೀರು ಹರಿಸಲಾಗುತ್ತಿದೆ. ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. 1,30,000 ಕ್ಯುಸೆಕ್ನಿಂದ 1,40,000 ಕ್ಯುಸೆಕ್ ವರೆಗೆ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಮಂಡಳಿಯ ಎಂಜಿನಿಯರ್ ವಿಶ್ವನಾಥ್ ತಿಳಿಸಿದ್ದಾರೆ.
‘ಸದ್ಯ ಜಲಾಶಯದ 33 ಕ್ರಸ್ಟ್ ಗೇಟ್ಗಳ ಪೈಕಿ 20 ಗೇಟ್ಗಳನ್ನು ತೆಗೆದು ನದಿಗೆ 45,670 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಹತ್ತು ಗೇಟ್ಗಳನ್ನು ತಲಾ ಎರಡು ಅಡಿ, ಇನ್ನುಳಿದ ಹತ್ತು ಗೇಟ್ಗಳನ್ನು ಒಂದು ಅಡಿ ಮೇಲಕ್ಕೆ ತೆಗೆದು ನದಿಗೆ ನೀರು ಬಿಡಲಾಗುತ್ತಿದೆ. 1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಸಂಪೂರ್ಣ ತುಂಬಿದೆ. 46,866 ಕ್ಯುಸೆಕ್ ಒಳಹರಿವು ಇದೆ. ಇದು ಇನ್ನೂ ಹೆಚ್ಚಾಗಲಿದ್ದು, ಸೋಮವಾರ (ಸೆ.21) ಬೆಳಿಗ್ಗೆ ಎಲ್ಲ ಕ್ರಸ್ಟ್ಗೇಟ್ಗಳನ್ನು ತೆಗೆದು ನದಿಗೆ ಒಂದು ಲಕ್ಷ ಕ್ಯುಸೆಕ್ಗೂ ಅಧಿಕ ನೀರು ಹರಿಸಲಾಗುವುದು. ಜನ ನದಿ ಪಾತ್ರದಲ್ಲಿ ಓಡಾಡಬಾರದು. ಈ ಸಂಬಂಧ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲಾಡಳಿತಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.