
ಮರಿಯಮ್ಮನಹಳ್ಳಿ: ಪಟ್ಟಣದ ಹೊರವಲಯದ ಜಿಟಿಟಿಸಿ ಕಾಲೇಜ್ ಬಳಿಯ ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿ- 25ರ ಸ್ವಾಗತ ಕಮಾನು ಹತ್ತಿರ ಭಾನುವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಸರಕು ಸಾಗಣಿಕೆಯ ಟಾಟಾ ಏಸ್ ವಾಹನ ಸುಟ್ಟು ಕರಕಲಾಯಿತು.
ಟಾಟಾ ಏಸ್ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವರದಾಪುರ ಗ್ರಾಮದ ಫಕೃದ್ಧೀನ್ ಎಂಬುವರಿಗೆ ಸೇರಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಫಕೃದ್ಧೀನ್ ಅವರು ಪಟ್ಟಣದಲ್ಲಿ ತಮ್ಮ ಸರಕು ಸಾಗಣಿಕೆಯ ಟಾಟಾ ಏಸ್ ವಾಹನವನ್ನು ಬಾಡಿಗೆಗೆ ಓಡಿಸುತ್ತಿದ್ದು, ಸಂಜೆ ವಾಪಸ ಗ್ರಾಮಕ್ಕೆ ತೆರಳುವ ಸಮಯದಲ್ಲಿ ಪಟ್ಟಣದ ಹೊರವಲಯದಲ್ಲಿ ವಾಹನದ ಡಿಸೇಲ್ ಟ್ಯಾಂಕ್ ಬಳಿಯ ವೈರ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಫಕೃದ್ಧೀನ್ ಅವರು ವಾಹನ ನಿಲ್ಲಿಸಿ ಬೆಂಕಿ ಆರಿಸಲು ಯತ್ನಿಸಿದ್ದಾರೆ. ಆದರೆ ಕ್ಷಣಾರ್ಧದಲ್ಲಿ ಬೆಂಕಿ ಇಡೀ ವಾಹನಕ್ಕೆ ತಗುಲಿ ಸುಟ್ಟು ಕರಕಲಾಗಿದೆ.
ಸಮಯಕ್ಕೆ ಸರಿಯಾಗಿ ಬಿಎಂಎಂ ಇಸ್ಪಾತ್ನ ತುರ್ತು ಸೇವೆ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.
ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಘಟನೆಯಿಂದಾಗಿ ಕೆಲ ನಿಮಿಷಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.