ADVERTISEMENT

ಎಚ್‍ಕೆಆರ್‌ಡಿಬಿ ಆ್ಯಪ್ ಶೀಘ್ರ ಜಾರಿ: ಸುಬೋದ್ ಯಾದವ್

ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2018, 16:42 IST
Last Updated 28 ಆಗಸ್ಟ್ 2018, 16:42 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಚ್‍ಕೆಆರ್‍ಡಿಬಿ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತ ಸುಬೋದ್ ಯಾದವ್ ಮಾತನಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಚ್‍ಕೆಆರ್‍ಡಿಬಿ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತ ಸುಬೋದ್ ಯಾದವ್ ಮಾತನಾಡಿದರು.   

ಬಳ್ಳಾರಿ: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕೈಗೆತ್ತಿಕೊಂಡ ಕಾಮಗಾರಿಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ ಪರಿಶೀಲನೆ ಮತ್ತು ಮಂಡಳಿಯ ವಿವಿಧ ಚಟುವಟಿಕೆಳಿಗಾಗಿ ಶೀಘ್ರ ‘ಎಚ್‍ಕೆಆರ್‌ಡಿಬಿ ಆ್ಯಪ್’ ಹೊರ ಬರಲಿದೆ ಎಂದು ಮಂಡಳಿ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತ ಸುಬೋದ್ ಯಾದವ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಎಚ್.ಕೆ.ಆರ್.ಡಿ.ಬಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಾಮಗಾರಿಗಳ ಪ್ರಗತಿ ಕಾರ್ಯ ಮತ್ತು ಹಣ ಸಂದಾಯ ಆಗಿರುವ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಗುವಂತೆ ಇಡೀ ಜಿಲ್ಲೆಯ ಸಮಗ್ರ ಏಜೆನ್ಸಿಗಳ ಮತ್ತು ಕಾಮಗಾರಿಗಳ ಮಾಹಿತಿ ಡ್ಯಾಶ್‍ ಬೋರ್ಡ್‌ ನೋಡುವ ವ್ಯವಸ್ಥೆ ಮಾಡುವಂತೆ ಮಂಡಳಿಯ ತಾಂತ್ರಿಕ ಕೋಶಕ್ಕೆ ಸೂಚಿಸಿದರು.

ADVERTISEMENT

ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಅನುದಾನ ನೀಡಲಾಗಿದೆ. ಜಾಗದ ಸಮಸ್ಯೆ ಇದೆ ಎಂದು ನಿಗದಿತ ಗುರಿ ಮುಂದೂಡಲು ಸಾಧ್ಯವಿಲ್ಲ; ಸಮಸ್ಯೆ ಬಗೆಹರಿಸಿ ಕಟ್ಟಡ ನಿರ್ಮಿಸಲಾಗದಿದ್ದರೆ ಟಾರ್ಗೆಟ್ ರದ್ದು ಮಾಡಿ ಹಣ ವಾಪಸ್ ಮಾಡಿ ಎಂದು ಹಡಗಲಿ ಲೋಕೋಪಯೋಗಿ ಅಧಿಕಾರಿಗೆ ಹೇಳಿದರು.

ಕೆಳಮಟ್ಟದ ಕಾಲುವೆಯಲ್ಲಿ ಏ 10ರವರೆಗೆ ನೀರಿದ್ದ ಕಾರಣ ಅಂದಾಜು ಪಟ್ಟಿ ತಯಾರಿಸಲು ಸಾಧ್ಯವಾಗಿಲ್ಲ ಮುಂದಿನ ದಿನಗಳಲ್ಲಿ ಮಾಡುವುದಾಗಿ ನೀರಾವರಿ ಎಂಜಿನಿಯರ್ ಒಬ್ಬರು ಹೇಳಿದಾಗ, ನೀವು ಹೇಳಿದಂತೆ ಮಾಡಲಾಗಲ್ಲ. ಕಾಮಗಾರಿ ಕೈ ಬಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕೋಪಯೋಗಿ, ನಿರ್ಮಿತಿ ಕೇಂದ್ರ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳಡಿ ಎಚ್‍ಕೆಆರ್‌ಡಿಬಿ ವತಿಯಿಂದ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದರು.

ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್ ಮನೋಹರ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ.ರಾಜೇಂದ್ರ, ಎಚ್‍ಕೆಆರ್‌ಡಿಬಿ ಜಂಟಿ ನಿರ್ದೇಶಕ ಬಸವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಇದ್ದರು.

***
ಕಾಮಗಾರಿಗಳನ್ನು ನಿಗದಿಪಡಿಸಿದ ಕಾಲಾವಧಿಯಲ್ಲಿ ಮುಗಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಇಲ್ಲದಿದ್ದಲ್ಲಿ ಕಾಮಗಾರಿಯನ್ನು ಹಿಂಪಡೆದು ಹಣವನ್ನು ಮಂಡಳಿಗೆ ಮರಳಿಸಬೇಕು
- ಸುಬೋದ್ ಯಾದವ್,ಎಚ್‍ಕೆಆರ್‌ಡಿಬಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.