
ಹೂವಿನಹಡಗಲಿ: ‘ಮೈಲಾರ ಸುಕ್ಷೇತ್ರದಲ್ಲಿ ಫೆ.4 ರಂದು ಜರುಗಲಿರುವ ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಸಮರ್ಪಕ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಮೈಲಾರ ಸುಕ್ಷೇತ್ರದ ಸಮುದಾಯ ಭವನದಲ್ಲಿ ಬುಧವಾರ ಜಾತ್ರಾ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
‘ಜಾತ್ರೆಗೆ ಬರುವ ಭಕ್ತರಿಗೆ ಶುದ್ಧ ಕುಡಿಯುವ ನೀರು, ಸಾರಿಗೆ, ನೈರ್ಮಲ್ಯ, ಆರೋಗ್ಯ ಸೇವೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸಬೇಕು. ಪಿಡಬ್ಲೂಡಿ ಮತ್ತು ಪಿಆರ್ಇ ಇಲಾಖೆಗೆ ಸೇರಿದ ರಸ್ತೆಗಳನ್ನು ಜಾತ್ರೆ ಒಳಗಾಗಿ ಆಯಾ ಇಲಾಖೆಗಳಿಂದ ದುರಸ್ತಿಪಡಿಸಬೇಕು’ ಎಂದು ಸೂಚಿಸಿದರು.
‘ಮೊಬೈಲ್ ನೆಟ್ವರ್ಕ್ ಸಮಸ್ಯೆ ತಪ್ಪಿಸಲು ತಾತ್ಕಾಲಿಕ ಟಾವರ್ ಅಳವಡಿಸಲು ಏರ್ಟೆಲ್ ಕಂಪನಿಗೆ ತಿಳಿಸಲಾಗಿದೆ. ಇಲಾಖಾವಾರು ವಾಟ್ಸ್ ಆಪ್ ಗ್ರೂಪ್ಗಳನ್ನು ರಚಿಸಿಕೊಂಡು ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡಬೇಕು. ಎಲ್ಲರ ಸಹಕಾರದಿಂದ ಜಾತ್ರೆಯನ್ನು ಯಶಸ್ವಿಗೊಳಿಸಬೇಕು’ ಎಂದು ತಿಳಿಸಿದರು.
ಶಾಸಕ ಎಲ್.ಕೃಷ್ಣನಾಯ್ಕ ಮಾತನಾಡಿ, ‘ಕಳೆದ ವರ್ಷದ ಜಾತ್ರೆಯ ನೂನ್ಯತೆ, ಲೋಪಗಳನ್ನು ಸರಿಪಡಿಸಿಕೊಂಡು ಭಕ್ತರಿಗೆ ಅಡಚಣೆಯಾಗದಂತೆ ಸೌಲಭ್ಯ ಕಲ್ಪಿಸಲಾಗುವುದು. ವಹಿಸಿದ ಜವಾಬ್ದಾರಿಗಳನ್ನು ಅಧಿಕಾರಿಗಳು ತಪ್ಪದೇ ನಿರ್ವಹಿಸಬೇಕು. ಐತಿಹಾಸಿಕ ಜಾತ್ರೆ ಯಶಸ್ಸಿಗೆ ಸ್ಥಳೀಯರು ಸಹಕಾರ ನೀಡಬೇಕು’ ಎಂದು ಹೇಳಿದರು.
ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಉಪ ವಿಭಾಗಾಧಿಕಾರಿ ವಿವೇಕಾನಂದ, ಡಿವೈಎಸ್ ಪಿ ಸಂತೋಷ ಚವ್ಹಾಣ್, ತಹಶೀಲ್ದಾರ್ ಕವಿತಾ, ತಾಲ್ಲೂಕು ಪಂಚಾಯಿತಿ ಇಒ ಜಿ.ಪರಮೇಶ್ವರ, ಸಿಪಿಐ ದೀಪಕ್ ಭೂಸರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಮ್ಮ ತಳವಾರ, ಧಾರ್ಮಿಕ ದತ್ತಿ ಇಲಾಖೆಯ ಸಹಾಯುಕ ಆಯುಕ್ತೆ ಎಚ್.ಸವಿತಾ, ದೇವಸ್ಥಾನ ಸಮಿತಿ ಇಒ ಮಲ್ಲಪ್ಪ ಇದ್ದರು.
ಮಾಧ್ಯಮ ಹೊರಗಿಟ್ಟು ಪ್ರತ್ಯೇಕ ಸಭೆ
ಜಾತ್ರಾ ಸಿದ್ಧತಾ ಸಭೆಗೂ ಮುನ್ನ ಜಿಲ್ಲಾಧಿಕಾರಿ ಮತ್ತು ಶಾಸಕರು ಮಾಧ್ಯಮದವರನ್ನು ಹೊರಗಿಟ್ಟು ಮೈಲಾರ ಪ್ರವಾಸಿ ಮಂದಿರದಲ್ಲಿ ‘ಸಮನ್ವಯ’ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿದರು. 11 ಗಂಟೆಗೆ ನಿಗದಿಯಾಗಿದ್ದ ಅಧಿಕೃತ ಸಭೆ 1.30ಕ್ಕೆ ಆರಂಭವಾಯಿತು. ಹಿಂದಿನ ಜಾತ್ರಾ ಸಭೆಯ ತೀರ್ಮಾನ ಓದಿ, ಈ ವರ್ಷ ಅಗತ್ಯ ಮಾರ್ಪಾಡು ಮಾಡಿಕೊಳ್ಳುವುದು ಸಂಪ್ರದಾಯ. ಆದರೆ, ಈ ಬಾರಿ ವಿಷಯವಾರು ಚರ್ಚಿಸದೇ ಸಭೆ ಮುಗಿಸಲಾಯಿತು.
ದೇವಸ್ಥಾನ ಹಣ ದುರ್ಬಳಕೆ: ತನಿಖೆ ನಡೆಸಿ
ಪ್ರತಿವರ್ಷ ಭಕ್ತರ ಅನುಕೂಲಕ್ಕಾಗಿ ನಾವು ಸೇರಿದಂತೆ ಅನೇಕ ರೈತರು ಪಂಪ್ ಸೆಟ್ ಮೂಲಕ ಉಚಿತವಾಗಿ ನೀರು ಪೂರೈಸುತ್ತೇವೆ. ಆದರೆ ದೇವಸ್ಥಾನದ ಹಿಂದಿನ ಇಒ ನಮಗೆ ಹಣ ಪಾವತಿಸಿದ್ದೇವೆಂದು ಬಿಲ್ ಮಾಡಿಕೊಂಡಿದ್ದಾರೆ. ನಾನು ಹಣ ಪಡೆದಿದ್ದನ್ನು ಸಾಬೀತುಪಡಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವೆ. ಈ ಕುರಿತು ತನಿಖೆ ನಡೆಸಿ ಎಂದು ಗಂಗಾಧರಯ್ಯ ಕಳ್ಳಿಮಠ ಒತ್ತಾಯಿಸಿದರು. ‘ಪ್ರತಿಬಾರಿ ಗ್ರಾಮಸ್ಥರ ಸಮ್ಮುಖದಲ್ಲೇ ಪೂರ್ವಭಾವಿ ಸಭೆ ನಡೆಸಲಾಗುತಿತ್ತು. ಈ ಬಾರಿ ಪ್ರತ್ಯೇಕ ಸಭೆ ನಡೆಸಿರುವುದು ಸರಿಯಲ್ಲ. ನೈರ್ಮಲ್ಯ ಸಮಸ್ಯೆಯಿಂದ ಜಾತ್ರೆ ನಂತರ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತದೆ. ಟ್ರಾಫಿಕ್ ಕಿರಿಕಿರಿಯಿಂದ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ’ ಎಂದು ಎಂ.ಬಿ.ಕೋರಿ ಗಮನ ಸೆಳೆದರು. ದೇವಸ್ಥಾನಕ್ಕೆ ವಾರ್ಷಿಕ ಐದಾರು ಕೋಟಿ ಆದಾಯವಿದ್ದರೂ ಸುಕ್ಷೇತ್ರ ಅಭಿವೃದ್ಧಿಯಾಗುತ್ತಿಲ್ಲ. ದೇವಾಲಯ ಆವರಣದಲ್ಲಿನ ಶುದ್ಧ ನೀರಿನ ಘಟಕ ಸ್ಥಗಿತವಾಗಿದ್ದರೂ ದುರಸ್ತಿ ಹೆಸರಲ್ಲಿ ಹಣ ಲಪಟಾಯಿಸಲಾಗಿದೆ. ಸುಕ್ಷೇತ್ರದ ನಿಗಾವಣೆಗೆ ಎಡಿಸಿ ಹುದ್ದೆ ಸೃಷ್ಟಿಸಬೇಕು ಎಂದು ಅನಿಲ್ ದಳವಾಯಿ ರವಿಕುಮಾರ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.