ಹೊಸಪೇಟೆ: ಇಲ್ಲಿನ ಎಸ್.ಆರ್. ನಗರದ ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ಸೋಂಕು ಇರುವುದು ಸೋಮವಾರ ಸಂಜೆ ದೃಢಪಟ್ಟಿದ್ದು, ಕುಟುಂಬದ ಒಬ್ಬರು ಇತ್ತೀಚೆಗೆ ಬೆಂಗಳೂರಿಗೆ ಹೋಗಿ ಬಂದಿದ್ದರು ಎಂದು ಗೊತ್ತಾಗಿದೆ.
ದುಬೈನಿಂದ ಬೆಂಗಳೂರಿಗೆ ಬಂದಿದ್ದ ಅವರ ಸಂಬಂಧಿಕರೊಬ್ಬರನ್ನು ಎಸ್.ಆರ್.ನಗರದ ವ್ಯಕ್ತಿ ಭೇಟಿ ಮಾಡಿದ್ದರು. ಈ ವೇಳೆ ಸೋಂಕು ತಗುಲಿರಬಹುದು ಎಂದು ಗೊತ್ತಾಗಿದೆ. ನಂತರ ನೇರವಾಗಿ ಮನೆಗೆ ಬಂದಿದ್ದು, ನಂತರ ಇನ್ನಿಬ್ಬರಿಗೂ ಸೋಂಕು ಹರಡಿದೆ.
ಇದೇ ಕುಟುಂಬದ ಇನ್ನಿಬ್ಬರಿಗೂ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದು, ಅವರನ್ನು ತೀವ್ರ ನಿಗಾದಲ್ಲಿ ಇಡಲಾಗಿದೆ ಎಂದು ತಿಳಿದು ಬಂದಿದೆ.
ಅಷ್ಟೇ ಅಲ್ಲ, ಸೋಂಕು ತಗುಲಿಸಿಕೊಂಡಿರುವವರು ಚಪ್ಪರದಹಳ್ಳಿಯ ಮದೀನಾ ಮಸೀದಿಯಲ್ಲಿ ಮಾ. 20ರಂದು ಪ್ರಾರ್ಥನೆಗೆ ಹೋಗಿದ್ದರು. ಈ ವೇಳೆ ಅನೇಕರು ಅಲ್ಲಿಗೆ ಬಂದಿದ್ದರು. ಅವರಿಗೂ ಸೋಂಕು ಹರಡಿರುವ ಸಾಧ್ಯತೆ ಇರುವುದರಿಂದ ಆ ದಿನ ಪ್ರಾರ್ಥನೆಗೆ ಹೋಗಿದ್ದವರು ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಅವರ ವಿವರ ಕಲೆ ಹಾಕುವ ಕೆಲಸವೂ ನಡೆದಿದೆ.
ಕಂಟೈನ್ಮೆಂಟ್ ಪ್ರದೇಶ:ಮೂರು ಪಾಸಿಟಿವ್ ಕೇಸ್ ಬಂದಿರುವುದರಿಂದ ಇಡೀ ನಗರವನ್ನು ಸೋಂಕುಪೀಡಿತ ಪ್ರದೇಶವೆಂದು (ಕಂಟೈನ್ಮೆಂಟ್ ಜೋನ್) ಘೋಷಿಸಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಆದೇಶ ಹೊರಡಿಸಿದ್ದಾರೆ.
ಮಂಗಳವಾರದಿಂದ (ಮಾ.31) ಜಾರಿಗೆ ಬರುವಂತೆ ನಗರದಲ್ಲಿ ಒಳ ಹಾಗೂ ಹೊರಹೋಗುವ ಎಲ್ಲಾ ರೀತಿಯ ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ. ಬೆಳಿಗ್ಗೆ ಒಂಬತ್ತರಿಂದ ಹತ್ತು ಗಂಟೆಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಕುಟುಂಬದ ಒಬ್ಬ ಸದಸ್ಯರು ಹೊರಬರಲು ಅವಕಾಶವಿದೆ. ಇಡೀ ನಗರದಾದ್ಯಂತ ಔಷಧ ಸಿಂಪಡಿಸಲಾಗುವುದು.
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ಮಾಡುವರು. ಕೆಮ್ಮು, ನೆಗಡಿ, ಜ್ವರ ಇದ್ದಲ್ಲಿ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.