ADVERTISEMENT

ಅಕ್ರಮ ಗಣಿಗಾರಿಕೆ ಶಾಶ್ವತ ತಡೆಗೆ ಅಗತ್ಯ ಕಾರ್ಯತಂತ್ರ ರಚನೆ: ಎಸ್.ಆರ್.ಹಿರೇಮಠ್

ಗಣಿಬಾಧಿತ ಪ್ರದೇಶದ ಜನರ ಪುನಶ್ಚೇತನಕ್ಕಾಗಿ ಸಮಗ್ರ ಯೋಜನೆ ಜಾರಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2018, 14:14 IST
Last Updated 29 ಆಗಸ್ಟ್ 2018, 14:14 IST
ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.   

ಬಳ್ಳಾರಿ: ಮೈನಿಂಗ್ ಮಾಫಿಯಾ ಮತ್ತೆ ಹೆಡೆ ಬಿಚ್ಚದಂತೆ ಶಾಶ್ವತವಾಗಿ ಮಟ್ಟಹಾಕಲು ಅಗತ್ಯವಾದ ಕಾರ್ಯತಂತ್ರ ರೂಪಿಸಲು ಗಣಿಬಾಧಿತ ಜನರ ಅಭಿವೃದ್ಧಿ ಸಮಿತಿಯಿಂದ ಸಂಡೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಗಣಿಭಾದಿತ ತಾಲ್ಲೂಕುಗಳ ಸುಸ್ಥಿರ ಅಭಿವೃದ್ಧಿ ಕುರಿತು ಆ.30ರಿಂದ ಎರಡು ದಿನಗಳ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ್ ತಿಳಿಸಿದರು.

ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆ.30 ಮತ್ತು 31ರಂದು ಎರಡು ದಿನಗಳ ಕಾಲ ನಡೆಯುವ ಕಾರ್ಯಗಾರಕ್ಕೆ ಬೆಂಗಳೂರು ಸೆಂಟ್ರಲ್ ಕಾಲೇಜಿನ ಪ್ರೊ.ವಿಷ್ಣುಕಾಮತ್ ಚಾಲನೆ ನೀಡಲಿದ್ದು, ಗಣಿಬಾಧಿತ ಪ್ರದೇಶದ ಜನರ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿ, ಅಲ್ಲಿನ ಜನರ ಉಪಜೀವನಕ್ಕೆ ಬೇಕಾದ ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ತೋಟಗಾರಿಕೆ, ಕುಡಿಯುವ ನೀರು, ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಅಲ್ಲದೆ ಮಹಿಳೆರ ಕಲ್ಯಾಣ ಸೇರಿದಂತೆ ಇನ್ನಿತರ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಯಲಿದೆ.

ಯೋಜನೆಗಳು ಹೇಗಿರಬೇಕು ಎಂಬುದು ಮತ್ತು ಸಹಕಾರಿ`ಸಂಘಗಳ ರಚನೆ ಮೂಲಕ ಯೋಜನೆ ಅನುಷ್ಠಾನ ಕುರಿತು ನಡೆಯುವ ಸಂವಾದದಲ್ಲಿ ತುಮಕೂರು(5) ಚಿತ್ರದುರ್ಗ(5) ಮತ್ತು ಬಳ್ಳಾರಿ ಜಿಲ್ಲೆಯ(30) ಒಟ್ಟು 40 ಮಂದಿ ಕಾರ್ಯಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಸತತ ಮೂರು ವರ್ಷಗಳ ಕಾಲ ತಾವು ನಡೆಸಿದ ಹೋರಾಟದ ಫಲವಾಗಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜನೀರು, ಹೊನ್ನೆಬಾಗ ಗ್ರಾಮಗಳ ಸುತ್ತಲಿನ ಅಂದಾಜು 1500 ಹೆಕ್ಟೇರ್ ಪ್ರದೇಶದ ಸರ್ಕಾರಿ ಭೂಮಿಯನ್ನು ಸಂರಕ್ಷಿಸಿ ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿರುವುದನ್ನು ಸ್ವಾಗತಿಸಿದರು. ಇತ್ತೇಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಿಪ್ಲಬಿಕ್ ಆಫ್ ಬಳ್ಳಾರಿ ಮತ್ತೆ ತಲೆ ಎತ್ತಲು ಪಯತ್ನಿಸಿತ್ತು. ರಾಷ್ಟ್ರೀಯ ಪಕ್ಷಗಳು ಮೈನಿಂಗ್ ಮಾಫಿಯಾ ರಕ್ಷಣೆಗೆ ನಿಂತಿರುವುದು ಸರಿಯಲ್ಲ ಅದು ಮತ್ತೆ ಮರುಕಳಿಸದಂತೆ ವ್ಯವಸ್ಥಿತ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಶಿವಕುಮಾರ, ಮಲ್ಲಿಕಾರ್ಜುನ ರೆಡ್ಡಿ, ಡಿ.ನಾಗಲಕ್ಷ್ಮಿ, ಸೋಮಶೇಖರಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.