ADVERTISEMENT

ಪಕ್ಷದ ಆಂತರಿಕ ವಿಚಾರ ಸಾರ್ವಜನಿಕವಾಗಿ ಚರ್ಚಿಸುವುದು ಸೂಕ್ತವಲ್ಲ: ವಿ.ಎಸ್.ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 14:50 IST
Last Updated 30 ಅಕ್ಟೋಬರ್ 2023, 14:50 IST
ವಿ.ಎಸ್.ಉಗ್ರಪ್ಪ
ವಿ.ಎಸ್.ಉಗ್ರಪ್ಪ   

ಹಗರಿಬೊಮ್ಮನಹಳ್ಳಿ: ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳು ಸಾರ್ವಜನಿಕವಾಗಿ ಚರ್ಚೆ ಮಾಡುವುದು ಸೂಕ್ತವಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಹೇಳಿದರು.

ತಾಲ್ಲೂಕಿನ ಬನ್ನಿಗೋಳ ಗ್ರಾಮದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪಕ್ಷದ ಸಂಘಟನೆಯಲ್ಲಿ ಏನಾದರೂ ಭಿನ್ನಾಭಿಪ್ರಾಯಗಳು ಇದ್ದರೆ ಗಮನ ಹರಿಸುತ್ತೇವೆ. ಇಂತಹ ವಿಚಾರಗಳನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತಂದು ಬಗೆಹರಿಸುತ್ತೇವೆ. ಪಕ್ಷವನ್ನು ಉಳಿಸುವುದಕ್ಕೆ ಹಾಗೂ ಮತ್ತಷ್ಟೂ ಗಟ್ಟಿ ಮಾಡುವುದಕ್ಕೆ ಗಮನ ಹರಿಸುತ್ತೇವೆ ಎಂದರು.

ADVERTISEMENT

ಪಕ್ಷದ ಆಂತರಿಕ ಕಚ್ಚಾಟದ ಕುರಿತಂತೆ ಪ್ರಶ್ನಿಸಿದಾಗ, ಎಲ್ಲರೂ ಪಕ್ಷನಿಷ್ಠರು ಇದ್ದಾರೆ. ವೈಯಕ್ತಿಕವಾದ ಸಣ್ಣಪುಟ್ಟ ಬೇರೆಬೇರೆ ಗೊಂದಲಗಳಿಂದ ಮತ್ತು ವ್ಯತ್ಯಾಸಗಳಿಂದ ಈ ರೀತಿಯ ಸಂದರ್ಭಗಳು ಸೃಷ್ಟಿಯಾಗುತ್ತವೆ, ಇವು ಮುಂದುವರೆಯಬಾರದು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ನೀಡಿರುವ ಹೇಳಿಕೆ ಕುರಿತು ಪೂರ್ಣವಾದ ಮಾಹಿತಿ ಇಲ್ಲ. ಈ ಕುರಿತು ಸಂಪೂರ್ಣ ಮಾಹಿತಿ ಪಡೆದು ಸಾಮರಸ್ಯ ರೂಪಿಸುವ ಪ್ರಯತ್ನ ಮಾಡುವೆ. ಅಗತ್ಯ ಬಿದ್ದರೆ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ಉಗ್ರಪ್ಪ ತಿಳಿಸಿದರು.

ಬಿಜೆಪಿ ಮತ್ತೆ ಆಪರೇಷನ್‍ಗೆ ಕೈ ಹಾಕಿದರೆ ರಾಜ್ಯದಲ್ಲಿ ಆಪಕ್ಷ ಶೂನ್ಯಕ್ಕೆ ಬರುವುದು ಗ್ಯಾರಂಟಿ. ರಾಜ್ಯದ ಗ್ಯಾರಂಟಿಗಳನ್ನು ಟೀಕಿಸಿದ ಬಿಜೆಪಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ನಕಲು ಮಾಡಿದೆ ಎಂದು ಲೇವಡಿ ಮಾಡಿದರು.

ಕೆ.ಎಂ.ಎಫ್ ಅಧ್ಯಕ್ಷ ಎಲ್.ಬಿ.ಪಿ.ಭೀಮನಾಯ್ಕ, ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಶಿವಯೋಗಿ, ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ್, ಮುಖಂಡರಾದ ಅಕ್ಕಿ ತೋಟೇಶ್, ಕುರಿ ಶಿವಮೂರ್ತಿ, ಹುಡೇದ ಗುರುಬಸವರಾಜ, ಹ್ಯಾಟಿ ಆನಂದರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.