
ಕಂಪ್ಲಿ: ತಾಲ್ಲೂಕಿನ ಎಮ್ಮಿಗನೂರು ಗ್ರಾಮ ವ್ಯಾಪ್ತಿಯಲ್ಲಿ ಬೆಳೆದಿರುವ ಜೋಳದ ಬೆಳೆಗೆ ಕಂದು ಜಿಗಿ ಹುಳು ಬಾಧೆ ಕಾಣಿಸಿಕೊಂಡಿದ್ದು, ರೈತರು ಆತಂಕಗೊಂಡಿದ್ದಾರೆ.
ತಾಲ್ಲೂಕಿನಲ್ಲಿ 2,900ಹೆಕ್ಟೇರ್ ಪ್ರದೇಶದಲ್ಲಿ ಹೈಟೆಕ್, ಕ್ರಿಸ್ಟಾಲ್, ಪಾರಸ್ ತಳಿ ಜೋಳ ಬೆಳೆಯಲಾಗಿದೆ. ಇದರಲ್ಲಿ ಶೇ 90ರಷ್ಟು ಭಾಗ ಎಮ್ಮಿಗನೂರು ಭಾಗದಲ್ಲಿಯೇ ಈ ತಳಿಗಳನ್ನು ಬೆಳೆದಿದ್ದು, ಕೊಯ್ಲು ಹಾಗೂ ಹಾಲು ತುಂಬುವ ಹಂತದಲ್ಲಿ ಪ್ರಸ್ತುತ ರೋಗ ಕಾಣಿಸಿಕೊಂಡಿದೆ.
ಚಳಿ, ತೇವಾಂಶ ಹೆಚ್ಚಳದಿಂದ ಜೋಳಕ್ಕೆ ಈ ಹುಳು ಬಾಧೆ ಕಾಣಿಸಿಕೊಂಡಿದ್ದು, ಇಳುವರಿ ಕುಸಿಯುವ ಭೀತಿಯೂ ಎದುರಾಗಿದೆ. ಎಕರೆಗೆ ₹ 30,000 ಜೋಳ ಬೆಳೆ ನಿರ್ವಹಣೆಗೆ ಖರ್ಚು ಮಾಡಲಾಗಿದ್ದು, ಎಕರೆಗೆ 25ರಿಂದ 30ಕ್ವಿಂಟಲ್ ಜೋಳ ಇಳುವರಿ ನಿರೀಕ್ಷಿಸಲಾಗಿತ್ತು.
ಆದರೆ, ಏಕಾಏಕಿ ರೋಗ ಬಾಧೆಯಿಂದ ಎಕರೆಗೆ ಐದು ಕ್ವಿಂಟಲ್ನಷ್ಟು ಇಳುವರಿ ಕುಸಿಯಲಿದೆ ಎಂದು ರೈತರಾದ ಮಲಕಪ್ಪನವರ ಬಾಲೇಸಾಬ್, ಬಜಾರ್ ಬಸವರಾಜ್, ವಿ. ವೀರೇಶ್ ಇತರರು ಕಳವಳ ವ್ಯಕ್ತಪಡಿಸಿದರು.
‘ಜೋಳ ಕಟಾವಿಗೆ ಸಿದ್ಧವಾಗಿದ್ದರೆ ಔಷಧಿ ಸಿಂಪರಣೆ ಅಗತ್ಯವಿಲ್ಲ. ಜೋಳ ಹಾಲುಗಾಳು ಹಂತದಲ್ಲಿದ್ದು, ಕಂದು ಜಿಗಿ ಹುಳು ಬಾದಿಸುತ್ತಿದ್ದರೆ ಅಸಿಪೇಟ್ 70ಡಬ್ಲ್ಯುಜಿ 1ಗ್ರಾಂ ಪೌಡರ್ ಅನ್ನು ಲೀಟರ್ ನೀರಿಗೆ, ಥಿಯಾಮೆಥಾಕ್ಸಮ್ 25ಡಬ್ಲ್ಯುಜಿ 0.5ಗ್ರಾಂ ಪೌಡರ್ ಅನ್ನು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದಲ್ಲಿ ರೋಗ ನಿಯಂತ್ರಣಕ್ಕೆ ಬರಲಿದೆ’ ಎಂದು ಕಂಪ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ. ಸೋಮಶೇಖರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.