
ಬಳ್ಳಾರಿ: ಕುಡುತಿನಿಯ ಕೆಐಎಡಿಬಿ ಕೈಗಾರಿಕಾ ಪ್ರದೇಶ- ಹಂತ-IIರಲ್ಲಿ ‘ಜೆಎಸ್ಡಬ್ಲ್ಯೂ-ಜೆಎಫ್ಇ ಎಲೆಕ್ಟ್ರಿಕಲ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್’ ಪ್ರಸ್ತಾಪಿಸಲು ಹೊರಟಿರುವ ‘ಕೋಲ್ಡ್ ರೋಲ್ಡ್ ಗ್ರೈನ್ ಓರಿಯಂಟೆಡ್ (ಸಿಆರ್ಜಿಒ) ಎಲೆಕ್ಟ್ರಿಕಲ್ ಸ್ಟೀಲ್ ಪ್ಲಾಂಟ್’ಗೆ ‘ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ (ಸಿಯಾ)’ವು ಪರಿಸರ ಅನುಮತಿ (ಇಸಿ) ಮಂಜೂರು ಮಾಡಿದೆ.
ಆರಂಭದಲ್ಲಿ ಲಕ್ಷ್ಮೀ ಮಿತ್ತಲ್ನ ಕಬ್ಬಿಣ ಕಾರ್ಖಾನೆಗೆಂದು ವಶಕ್ಕೆ ಪಡೆಯಲಾಗಿದ್ದ ಭೂಮಿಯ ಒಂದಷ್ಟು ಭಾಗವನ್ನು ಕೆಐಎಡಿಬಿಯು ಜೆಎಸ್ಡಬ್ಲ್ಯೂಗೆ ನೀಡಿದ್ದು, ಅಲ್ಲಿ ಈ ಉದ್ದಿಮೆ ಸ್ಥಾಪನೆಯಾಗುತ್ತಿದೆ. ಇದರೊಂದಿಗೆ ರಾಜ್ಯದ ಪ್ರಮುಖ ಉಕ್ಕು ಉತ್ಪಾದನಾ ಘಟಕವೊಂದಕ್ಕೆ ದಾರಿಮಾಡಿಕೊಟ್ಟಂತಾಗಿದೆ.
‘ಭೂಮಿಯನ್ನು ಯಾವ ಉದ್ದೇಶಕ್ಕೆ ವಶಕ್ಕೆ ಪಡೆಯಲಾಗಿದೆಯೋ, ಅದೇ ಉದ್ದೇಶಕ್ಕೆ ಬಳಸಬೇಕು. ಯಾರಿಗಾಗಿ ವಶಕ್ಕೆ ಪಡೆಯಲಾಗಿದೆಯೋ ಅವರೇ ಉದ್ದಿಮೆ ಸ್ಥಾಪಿಸಬೇಕು. ವಶಪಡಿಸಿಕೊಂಡಿರುವ ಭೂಮಿಗೆ ನ್ಯಾಯದ ಬೆಲೆ ನಿಗದಿ ಮಾಡಬೇಕು ಎಂದು ಕುಡುತಿನಿ ಭೂಸಂತ್ರಸ್ತ ಹೋರಾಟಗಾರರು ಒತ್ತಾಯಿಸುತ್ತಿರುವ ಮಧ್ಯಯೇ, ಹೋರಾಟವನ್ನು ಮುಂಬರುವ ದಿನಗಳಲ್ಲಿ ತೀವ್ರಗೊಳಿಸುವ ನಿರ್ಧಾರಗಳ ನಡುವೆಯೇ ಈ ಬೆಳವಣಿಗೆಯೂ ನಡೆದಿದೆ.
ಇದೇ ಫೆಬ್ರುವರಿ 3ರಂದು ಪ್ರಾಧಿಕಾರವು ಇ.ಸಿ ಮಂಜೂರು ಮಾಡಿದೆ. ವರ್ಷಕ್ಕೆ 2,16,000 ಟನ್ಗಳ ಸಿಆರ್ಜಿಒ ಉಕ್ಕು ಉತ್ಪಾದಿಸುವ ಘಟಕ ಸ್ಥಾಪಿಸಲು ಕಂಪನಿಗೆ ಅನುಮತಿ ನೀಡಲಾಗಿದೆ. ಯೋಜನೆಯ ಪರಿಸರ ಪರಿಣಾಮ, ಪರಿಸರ ನಿರ್ವಹಣಾ ಯೋಜನೆಯ ವಿವರವಾದ ಮೌಲ್ಯಮಾಪನ ಮತ್ತು 2025ರ ಸೆಪ್ಟೆಂಬರ್ನಲ್ಲಿ ನಡೆದಿದ್ದ ಸಾರ್ವಜನಿಕರ ಅಭಿಪ್ರಾಯ ಆಲಿಕೆ ಸಭೆಗಳನ್ನು ಪರಾಮರ್ಶಿಸಿ ಪ್ರಾಧಿಕಾರ ಇ.ಸಿ ನೀಡಿದೆ.
ಸುಮಾರು 199.90 ಎಕರೆ (80.9 ಹೆಕ್ಟೇರ್) ಭೂಮಿಯಲ್ಲಿ ತಲೆಎತ್ತಲಿರುವ ಈ ಯೋಜನೆಗೆ ಜೆಎಸ್ಡಬ್ಲ್ಯೂ ₹11,890 ಕೋಟಿ ಹೂಡಿಕೆ ಮಾಡುತ್ತಿದೆ. ಇದು ಈ ಪ್ರದೇಶದಲ್ಲಿ ಸ್ಥಳೀಯ ಉದ್ಯೋಗ ಮತ್ತು ಕೈಗಾರಿಕಾ ಬೆಳವಣಿಗೆಗೆ ಉತ್ತೇಜನವನ್ನು ನೀಡಲಿದೆ ಎಂದೂ ತಿಳಿಸಿದೆ.
ಇ.ಸಿ ಮಂಜೂರು ಮಾಡುವ ವೇಳೆ ‘ಸಿಯಾ’ ಕಟ್ಟುನಿಟ್ಟಿನ ಸೂಚನೆಗಳನ್ನೂ ನೀಡಿದೆ. ಉದ್ದಿಮೆಯ ಪರಿಮಿತಿಯಲ್ಲಿ ಕನಿಷ್ಠ 71,825 ಮರಗಳನ್ನು ಹೊಂದಿರುವ ‘ಐದು-ಸಾಲಿನ ಹಸಿರು ಪಟ್ಟಿ’ಯನ್ನು ಬೆಳೆಸಬೇಕು, ಶೂನ್ಯ ದ್ರವ ವಿಸರ್ಜನೆ ವ್ಯವಸ್ಥೆ ಅಳವಡಿಸಿಕೊಳ್ಳಬೇಕು, ಗಾಳಿ ಮತ್ತು ತ್ಯಾಜ್ಯ ನಿಯಂತ್ರಣಾ ಸಾಧನಗಳನ್ನು ಸ್ಥಾಪಿಸಬೇಕು ಎಂದು ಕಂಪನಿಗೆ ತಿಳಿಸಲಾಗಿದೆ. ಕಾರ್ಯಾಚರಣೆಯ ಹಂತದಲ್ಲಿ ಅಂತರ್ಜಲ ಬಳಕೆ ನಿಷೇಧಿಸಲಾಗಿದ್ದು, ಹೊರಸೂಸುವಿಕೆಗಳು ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರಬೇಕು, ಸುಧಾರಿತ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದೂ ಸೂಚನೆ ನೀಡಲಾಗಿದೆ.
ಇದರ ಜೊತೆಗೆ, ಕಂಪನಿಯು ಚಾವಣಿಯಲ್ಲಿ ಸೌರ ಘಟಕ ಸ್ಥಾಪಿಸಿ ವಿದ್ಯುತ್ ಬಳಸಿಕೊಳ್ಳಬೇಕು, 2,00,000 ಘನ ಮೀಟರ್ಗಳಿಗಿಂತ ಹೆಚ್ಚಿನ ಸಾಮರ್ಥ್ಯದ ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ನಿರ್ಮಿಸಬೇಕು, ‘ಹಸಿರು ಪಟ್ಟಿ’ಯ ನಿರ್ವಹಣೆ ಸೇರಿದಂತೆ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಉದ್ದಿಮೆಯೊಳಗೆ ಮರುಬಳಕೆ ಮಾಡಿಕೊಳ್ಳಬೇಕು ಎಂಬ ಸೂಚನೆಗಳನ್ನು ನೀಡಲಾಗಿದೆ.
ಈ ಷರತ್ತುಗಳ ಪಾಲನೆಯ ಮೇಲೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕಣ್ಣಿಡಲಿದೆ. ಸಂಸ್ಥೆಯು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶಿಕ್ಷಣ, ಆರೋಗ್ಯ ರಕ್ಷಣೆ, ಮೂಲಸೌಕರ್ಯ ಮತ್ತು ಪರಿಸರ ಜಾಗೃತಿಗೆ ಸಂಬಂಧಿಸಿದಂತೆ ‘ಕಾರ್ಪೊರೇಟ್ ಪರಿಸರ ಜವಾಬ್ದಾರಿ ಉಪಕ್ರಮ (ಸಿಇಆರ್)’ಗಳನ್ನು ಕೈಗೊಳ್ಳುವ ಅಗತ್ಯವೂ ಇದೆ.
ಶೈಕ್ಷಣಿಕ ಅರ್ಹತೆ ಆಧರಿಸಿ ಕೆಲಸ
ಭೂಮಿ ಕಳೆದುಕೊಂಡವರು ರೈತರು ಸ್ಥಳೀಯರಿಗೆ ಯೋಜನೆ ನಿರ್ಮಾಣ ಹಂತದಲ್ಲಿ 2500 (150 ನೇರ 2350 ಪರೋಕ್ಷ) ಕಾರ್ಯಾರಂಭ ಬಳಿಕ 1250 (909 ನೇರ 341 ಪರೋಕ್ಷ) ಉದ್ಯೋಗಗಳನ್ನು ನೀಡುವುದಾಗಿ ಕಂಪನಿ ಹೇಳಿದ್ದರೂ ಶೈಕ್ಷಣಿಕ ಅರ್ಹತೆಯೇ ಮಾನದಂಡ ಎಂದು ಕಂಪನಿ ಸ್ಪಷ್ಟಪಡಿಸಿದೆ. ಸಮುದಾಯ ಯೋಗಕ್ಷೇಮ ಮೂಲಸೌಕರ್ಯ ಶಿಕ್ಷಣ ಆರೋಗ್ಯ ರಕ್ಷಣೆ ನೈರ್ಮಲ್ಯ ರಸ್ತೆ ಮತ್ತು ಕುಡಿಯುವ ನೀರಿಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಪನಿಯು ಸಿಇಆರ್ ಅಡಿಯಲ್ಲಿ ₹6 ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದೆ.
ಮೇಲ್ಮನವಿಗೆ 30 ದಿನಗಳ ಅವಕಾಶ
ಸದ್ಯ ಜೆಎಸ್ಡಬ್ಲ್ಯೂಗೆ ನೀಡಿರುವ ಈ ಅನುಮತಿಯನ್ನು ಪ್ರಶ್ನಿಸಲೂ ಅವಕಾಶ ನೀಡಲಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯ್ದೆ 2010 ರ ಸೆಕ್ಷನ್ 16ರ ಅಡಿಯಲ್ಲಿಯಾವುದೇ ಮೇಲ್ಮನವಿಯನ್ನು 30 ದಿನಗಳ ಒಳಗಾಗಿ ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ’ಯಲ್ಲಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.