ಪಂಡಿತಾರಾಧ್ಯ ಎಚ್.ಎಂ. ಮೆಟ್ರಿ
ಕಂಪ್ಲಿ: ಪಟ್ಟಣದ ಆರಾಧ್ಯ ದೈವ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ 11 ದಿನ ವಿವಿಧ ದೇವರುಗಳ ಗೊಂಬೆ (ಮೂರ್ತಿ) ಅಲಂಕಾರ ಪ್ರದರ್ಶನ ವೈಭವದಿಂದ ನಡೆಯಲಿದೆ.
ಸೆ.22ರಿಂದ ಅ. 2ರವರೆಗೆ ಕ್ರಮವಾಗಿ ಇಡುಗುಂಜಿ ಗಣೇಶ, ವೀರಭದ್ರೇಶ್ವರಸ್ವಾಮಿ, ಹೊರನಾಡು ಅನ್ನಪೂರ್ಣೇಶ್ವರಿ, ಶ್ರೀಗುರು ಕೊಟ್ಟೂರು ಬಸವೇಶ್ವರ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ, ಎಮ್ಮಿಗನೂರು ಜಡೆಸಿದ್ದೇಶ್ವರ, ಧರ್ಮಸ್ಥಳ ಮಂಜುನಾಥಸ್ವಾಮಿ, ಕಲಬುರಗಿ ಶರಣಬಸವೇಶ್ವರ ಮತ್ತು ಜಗದ್ಗುರು ರೇಣುಕಾಚಾರ್ಯ, ಆದಿಶಕ್ತಿ, ಶಿವ ಪಾರ್ವತಿ ಕಲ್ಯಾಣ ಗೊಂಬೆಗಳ ಅದ್ದೂರಿ ಪ್ರದರ್ಶನ ಭಕ್ತರ ಸಹಕಾರದೊಂದಿಗೆ ಸಂಭ್ರಮದಿಂದ ಜರುಗುತ್ತದೆ.
ನಿತ್ಯ ಸಂಜೆ 6ಕ್ಕೆ ಆರಂಭಗೊಳ್ಳುವ ಗೊಂಬೆಗಳ ಅಲಂಕಾರ ಪ್ರದರ್ಶನಕ್ಕೆ ಮುನ್ನ ಭಕ್ತರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಪ್ರಸಾದ ವಿತರಣೆ ನಂತರ ರಾತ್ರಿ 10.30ಕ್ಕೆ ಮಂಗಳಾರತಿಯೊಂದಿಗೆ ದೇವರ ಗೊಂಬೆ ವಿಸರ್ಜನೆ ನಡೆಯುತ್ತದೆ.
ಪರಶುರಾಮಪ್ಪ ಚಿತ್ರಗಾರ ವಿಜಯನಗರ ಜನಪದ ಕರಕುಶಲ ಕಲೆಗಳ ಟ್ರಸ್ಟ್ ಅಧ್ಯಕ್ಷೆ ಸಮಿತ್ರಮ್ಮ ಚಿತ್ರಗಾರ ಕುಟುಂದವರು ನವರಾತ್ರಿ ವೇಳೆ ಗೊಂಬೆ ಅಲಂಕಾರ ಸೇವೆ ಸಲ್ಲಿಸುತ್ತಾರೆ.
‘ನಾಡಿನ ವಿವಿಧ ದೇವರ, ಪವಾಡ ಪುರುಷರ ಗೊಂಬೆ(ಮೂರ್ತಿ) ಅಲಂಕಾರ ಮಾಡಿ ಪೂಜಿಸಿ ಪ್ರದರ್ಶಿಸುವ ಸಂಪ್ರದಾಯ ನಾಲ್ಕು ದಶಕಗಳಿಂದ ಭಕ್ತರ ಸಹಕಾರದೊಂದಿಗೆ ನಡೆದುಕೊಂಡು ಬರುತ್ತಿದೆ. ಅದರಿಂದ ಈ ಭಾಗದಲ್ಲಿ ನಾಡಹಬ್ಬ ದಸರಾ ಕಳೆ ಕಟ್ಟುತ್ತದೆ’ ಎಂದು ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ. ವೀರಪ್ಪ, ಧರ್ಮಕರ್ತ ಯು.ಎಂ. ವಿದ್ಯಾಶಂಕರ ಮತ್ತು ಕಾರ್ಯಕಾರಿ ಮಂಡಳಿಯವರು ತಿಳಿಸಿದರು.
ನವರಾತ್ರಿ ಪ್ರಯುಕ್ತ ಪಟ್ಟಣ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ದೇವಿಪುರಾಣ ಮಹಾತ್ಮೆ, ದೇವಿ ವಿಗ್ರಹಗಳ ಸ್ಥಾಪನೆ, ನಿತ್ಯ ಆಕರ್ಷಕ ಅಲಂಕಾರ, ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗರಿಗೆದರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.