
ಕಂಪ್ಲಿ: ಪುರಸಭೆ ತೆರಿಗೆ ಸಹಾಯಕರು ವಿವಿಧ ತೆರಿಗೆ ಸಂಗ್ರಹಿಸುವಾಗ ವರ್ಷಕ್ಕೆ ನಿಗದಿಪಡಿಸಿರುವ ಶುಲ್ಕಕ್ಕಿಂತ ಅಧಿಕ ಹಣ ಪಡೆಯುತ್ತಿದ್ದಾರೆ ಎನ್ನುವ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಬುಧವಾರ ಏಕಾಏಕಿ ಪುರಸಭೆ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.
ತೆರಿಗೆ ಸಹಾಯಕರು ಸಾರ್ವಜನಿಕರಿಂದ ಪಡೆದುಕೊಳ್ಳುವ ಹಣಕ್ಕೆ ರಸೀದಿ ನೀಡುತ್ತಿಲ್ಲ. ವಿವಿಧ ತೆರಿಗೆ ಕುರಿತ ಶುಲ್ಕದ ಮಾಹಿತಿ ಇರುವ ಬೋರ್ಡ್ ಪ್ರದರ್ಶಿಸಿಲ್ಲ ಎಂದು ಬಳ್ಳಾರಿ ಲೋಕಾಯುಕ್ತ ಡಿವೈಎಸ್ಪಿ ಎಸ್.ಎಸ್.ಬೀಳಗಿ ಬೇಸರ ವ್ಯಕ್ತಪಡಿಸಿದರು.
ಪುರಸಭೆಯಲ್ಲಿನ ತೆರಿಗೆ ಸಹಾಯಕರು ಖಾಸಗಿ ಏಜೆನ್ಸಿಗೆ ಸಂಬಂಧಿಸಿದವರಾಗಿದ್ದು, ಕಚೇರಿಯಲ್ಲಿಯೇ ಠಿಕಾಣಿ ಹೂಡುವುದರ ಜೊತೆಗೆ ವಿದ್ಯುತ್ ಸೇರಿ ಅಗತ್ಯ ಸಾಮಗ್ರಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಮೇ¯ಧಿಕಾರಿಗಳಿಗೆ ವರದಿ ಮಾಡುವುದಾಗಿ ತಿಳಿಸಿದರು.
ತೆರಿಗೆ ಸಹಾಯಕರು ಪಾರದರ್ಶಕತೆ ಕಾಪಾಡಬೇಕು. ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಕೆಲಸ ಕಾರ್ಯಗಳನ್ನು ಸಕಾಲಕ್ಕೆ ಮಾಡಿಕೊಡಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ಬಳಿಕ ಮಾರುತಿನಗರದ 1ನೇ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದಾಗ, ಕಾರ್ಯಕರ್ತೆ ಬಿಎಲ್ಒ ಅಧಿಕಾರಿಯಾಗಿ 17ನೇ ವಾರ್ಡ್ನಲ್ಲಿ ಕರ್ತವ್ಯದ ಮೇಲೆ ತೆರಳಿರುವ ಮಾಹಿತಿ ಅಧಿಕಾರಿಗೆ ಲಭ್ಯವಾಯಿತು. ನಂತರ ವಿಷಯ ತಿಳಿದ ಕಾರ್ಯಕರ್ತೆ ಉಷಾ ಅವರು ಬಂದಾಗ ಕೇಂದ್ರ ಬಿಟ್ಟು ತೆರಳುವ ಮುನ್ನ ಚಲನವಲನ ಪುಸ್ತಕದಲ್ಲಿ ದಾಖಲಿಸುವಂತೆ, ಪೋಷಕರಿಗೆ ಶಿಕ್ಷಣ ಮಾಹಿತಿ ನೀಡುವಂತೆ ಡಿವೈಎಸ್ಪಿ ತಿಳಿಸಿದರು.
ಅಂಗನವಾಡಿ ಕೇಂದ್ರದ ಸ್ವಚ್ಛತೆ, ದಾಖಲಾತಿ ನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.