ADVERTISEMENT

‘ಕನ್ನಡ ಭಾಷೆಯ ಘನತೆ ಹೆಚ್ಚಿಸಿದ ಕನಕದಾಸರು’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 11:59 IST
Last Updated 5 ಡಿಸೆಂಬರ್ 2018, 11:59 IST
ಹೊಸಪೇಟೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ ಉದ್ಘಾಟಿಸಿದರು
ಹೊಸಪೇಟೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ ಉದ್ಘಾಟಿಸಿದರು   

ಹೊಸಪೇಟೆ: ‘ಕನ್ನಡ ಭಾಷೆಯೇ ಶ್ರೇಷ್ಠವೆಂದು ಭಾವಿಸಿ, ಅದರಲ್ಲಿಯೇ ಕೀರ್ತನೆಗಳನ್ನು ಬರೆದು ಶ್ರೀಮಂತಗೊಳಿಸಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ’ ಎಂದು ಪ್ರಾಧ್ಯಾಪಕ ದಯಾನಂದ ಕಿನ್ನಾಳ ತಿಳಿಸಿದರು.

ತಾಲ್ಲೂಕು ಕುರುಬರ ಸಂಘ ಹಾಗೂ ತಾಲ್ಲೂಕು ಆಡಳಿತದ ಸಹಭಾಗಿತ್ವದಲ್ಲಿ ಬುಧವಾರ ಇಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

‘ಸಂಸ್ಕೃತ ಕಲಿತವರಷ್ಟೇ ಶ್ರೇಷ್ಠ ಮನುಷ್ಯರು ಎಂದು ಪುರೋಹಿತಷಾಹಿ ವರ್ಗ ವ್ಯವಸ್ಥೆ ಮಾಡಿತ್ತು. ಆದರೆ, ಅದು ಸುಳ್ಳು ಎನ್ನುವಂತೆ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿ, ಜನಸಾಮಾನ್ಯರಿಗೆ ಸುಲಭವಾಗಿ ಓದುವಂತೆ ಮಾಡಿದರು. ಕೀರ್ತನೆಗಳು, ಸುಳಾದಿ, ಉಗಾಭೋಗಾಧಿಗಳು ಅವರ ಜ್ಞಾನ ಸಂಪತ್ತಿನ ಫಲ. ‘ಮೋಹನ ತರಂಗಿಣಿ’, ‘ಹರಿಭಕ್ತ ಸಾರ’, ‘ನಳ ಚರಿತೆ’, ‘ರಾಮಧ್ಯಾನ ಚರಿತೆ’ ಕೃತಿಗಳಲ್ಲಿ ರಾಗಿ–ಭತ್ತವನ್ನು, ಬಡವ–ಶ್ರೀಮಂತರಿಗೆ ಹೋಲಿಸಿ ಬರೆದಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘250ಕ್ಕೂ ಹೆಚ್ಚಿನ ದಾಸರಲ್ಲಿ ಕನಕದಾಸರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಆದರೆ, ಅವರ ವಿದ್ವತ್ತು, ದೈವಭಕ್ತಿಯಿಂದ ತಮ್ಮದೇ ಛಾಪು ಮೂಡಿಸಿಕೊಂಡರು. ದಾಸರಲ್ಲಿ ಶ್ರೇಷ್ಠರೆನಿಸಿಕೊಂಡರು’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ ಉದ್ಘಾಟಿಸಿದರು. ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಭರಮಲಿಂಗನಗೌಡ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಧರ್ಮೇಂದ್ರ ಸಿಂಗ್‌, ಡಿ. ಚೆನ್ನಪ್ಪ, ಅಯ್ಯಾಳಿ ಮೂರ್ತಿ, ಎಚ್‌. ಮಹೇಶ್‌, ಗಂಟೆ ಸೋಮಶೇಖರ್‌, ರವಿಶಂಕರ್‌ ದೇವರಮನಿ, ನಗರಸಭೆ ಪೌರಾಯುಕ್ತ ವಿ. ರಮೇಶ್‌, ಸದಸ್ಯರಾದ ಚಿದಾನಂದಪ್ಪ, ರಾಮಚಂದ್ರಗೌಡ, ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘದ ಅಧ್ಯಕ್ಷ ಎಂ.ಸಿ. ವೀರಸ್ವಾಮಿ, ಡಿ.ವೈ.ಎಸ್‌.ಪಿ. ಕೆ. ಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.