
ಹಗರಿಬೊಮ್ಮನಹಳ್ಳಿ: ‘ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾನತೆಯನ್ನು ಪ್ರತಿಪಾದಿಸಿದ ದಾರ್ಶನಿಕ’ ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಕುರುಬರ ಸಂಘದಿಂದ ಮೆಟ್ರಿ ಗೋಣೆಪ್ಪ ಅವರು ದಾನ ನೀಡಿದ ನಿವೇಶನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ 538ನೇ ಜಯಂತ್ಯುತ್ಸವ ಮತ್ತು ₹1ಕೋಟಿ ಮೊತ್ತದ ಕನಕ ಸಮುದಾಯ ಭವನದ ಕಟ್ಟಡಕ್ಕೆ ಭೂಮಿಪೂಜೆ ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ಸಮ ಸಮಾಜ ನಿರ್ಮಿಸುವುದಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟರು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಚಿಲಗೋಡು ಗ್ರಾಮದ ಕರಿಯಮ್ಮ ದೇವಿ ದೇವಸ್ಥಾನಕ್ಕೆ ಅನುದಾನ ನೀಡಲಾಗುವುದು, ಸಮುದಾಯ ಭವನದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ಕೆಕೆಆರ್ಟಿಸಿ ಬಸ್ ನಿಲ್ದಾಣದ ಎದುರಿನ ರಸ್ತೆಯ ಕನಕ ವೃತ್ತದಲ್ಲಿ ಪುತ್ಥಳಿ ನಿರ್ಮಿಸುವುದಾಗಿ ಭರವಸೆ ನೀಡಿದರು.
ತಿಂಥಿಣಿ ಬ್ರಿಡ್ಜ್ ಕನಕಗುರು ಪೀಠದ ಸಿದ್ಧರಾಮಾನಂದಪುರಿ ಸ್ವಾಮೀಜಿ, ಕುರುಬ ಸಮುದಾಯದ ವಿದ್ಯಾರ್ಥಿಗಳಿಗಾಗಿ ಪಟ್ಟಣದಲ್ಲಿ ವಸತಿ ನಿಲಯ ಆರಂಭಿಸುವ ಅಗತ್ಯ ಇದೆ. ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ಭೇಟಿ ನೀಡಲಾಗುವುದು, ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣದ ಜತೆ ಸಂಸ್ಕಾರ ನೀಡುವ ಅಗತ್ಯ ಇದೆ ಎಂದು ತಿಳಿಸಿದರು. ನಂದಿಪುರದ ಮಹೇಶ್ವರ ಸ್ವಾಮೀಜಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸೊಬಟಿ ಗ್ರಾಮಸ್ಥರು ಶಾಸಕ ನೇಮರಾಜನಾಯ್ಕಗೆ ಕುರಿಮರಿ ದೇಣಿಗೆ ನೀಡಿದರು, ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಅನೇಕರು ದೇಣಿಗೆ ನೀಡಿದರು.
ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮೈನಳ್ಳಿ ಶಿವರಾಜ್, ಮುಖಂಡರಾದ ಕೊಟ್ರಯ್ಯ ಒಡೆಯರ್, ನಿಕಟಪೂರ್ವ ಅಧ್ಯಕ್ಷ ಬುಡ್ಡಿ ಬಸವರಾಜ, ಮುಟುಗನಹಳ್ಳಿ ಕೊಟ್ರೇಶ್, ಪುರಸಭೆ ಸದಸ್ಯ ಬಣಕಾರ ಸುರೇಶ, ಪ್ರಭಾಕರ, ಬಣಕಾರ ಗೋಣೆಪ್ಪ, ಮೈಲಾರಪ್ಪ, ಸೊನ್ನದ ಮಹೇಶ್, ಕನ್ನಿಹಳ್ಳಿ ಚಂದ್ರಶೇಖರ, ಬ್ಯಾಟಿ ನಾಗರಾಜ, ಬಿ.ಎಂ.ಆಂಜನೇಯ, ಮುಟುಗನಹಳ್ಳಿ ಹನುಮಂತಪ್ಪ, ಭಂಡಾರಿ ಭರಮಪ್ಪ, ಹುಡೇದ್ ಹುಲುಗಪ್ಪ, ಕೋಗಳಿ ಹನುಮಂತಪ್ಪ, ಬಣಕಾರ ಗೋಣೆಪ್ಪ, ಮಾಲತೇಶ್, ಪರಶುರಾಮ, ಎಚ್.ಮಂಜುನಾಥ ಇದ್ದರು.
ಪಟ್ಟಣದ ಈಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು. 500ಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭಗಳನ್ನು ಹೊತ್ತು ಸಾಗಿದರು. ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.