
ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಲಿಂಗೈಕ್ಯ ಕರಿಸಿದ್ದೇಶ್ವರ ಶಿವಾಚಾರ್ಯ ಶಿವಯೋಗಿಗಳ 13ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಸಾಮೂಹಿಕ ವಿವಾಹ, ಧರ್ಮಜಾಗೃತಿ, ಕರಿಸಿದ್ದಶ್ರಿ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಜರುಗಿದವು.
ಬಾಲತಪಸ್ವಿ ಕರಿಸಿದ್ದೇಶ್ವರ ಶಿವಾಚಾರ್ಯರ ಧಾರ್ಮಿಕ, ಸಾಮಾಜಿಕ ಕೈಂಕರ್ಯ ಕುರಿತು ಸಾನ್ನಿಧ್ಯ ವಹಿಸಿದ್ದ ಮುಗಳಖೋಡದ ಜಿಡಗಾ ಸುಕ್ಷೇತ್ರದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ, ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು ಮತ್ತು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಸ್ಮರಿಸಿದರು.
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ. ಮೂಕಯ್ಯಸ್ವಾಮಿ, ಕುಣಿಕೇರಿತಾಂಡದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಸ್ಥಳ ದಾನ ಮಾಡಿದ ಹುಚ್ಚಮ್ಮ ಬಸಪ್ಪ ಚೌದ್ರಿ ಮತ್ತು ಶ್ರೀಮಠದ ಅವಿರತ ಸೇವೆಗಾಗಿ ಮರೇಗೌಡ ಮಾಲೀಪಾಟೀಲರಿಗೆ ಮರಣೋತ್ತರವಾಗಿ ಅವರ ಪುತ್ರ ಶರಣಪ್ಪ ಮಾಲಿಪಾಟೀಲ ಅವರಿಗೆ ‘ಕರಿಸಿದ್ದಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದಕ್ಕು ಮುನ್ನ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಬಳಿಕ ಎರಡು ಜೋಡಿ ಸಾಮೂಹಿಕ ವಿವಾಹ ಜರುಗಿದವು. ಭಕ್ತರಿಗೆ ಅನ್ನಸಂತರ್ಪಣೆಯೂ ಏರ್ಪಡಿಸಲಾಗಿತ್ತು. ಕರಿಸಿದ್ದೇಶ್ವರ ವಿಶ್ವಾರಾಧ್ಯ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು.
ಕೊಟ್ಟೂರು ಚಾನುಕೋಟಿಮಠದ ಸಿದ್ದಲಿಂಗ ಶಿವಾಚಾರ್ಯರು, ಹೂವಿನಹಡಗಲಿಯ ಹಿರಿಯ ಶಾಂತವೀರಸ್ವಾಮೀಜಿ, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಅಚಲೇರಿ ಹಿರೇಮಠದ ಸುಪ್ರೇಶ್ವರ ಶಿವಾಚಾರ್ಯರು, ಬೀಳಗಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಐ. ಸಂಗನಬಸಪ್ಪ, ಪ್ರಮುಖರಾದ ಬಿ.ಎಲ್. ಸಂಯುಕ್ತರಾಣಿ, ಸಾಲಿ ಸಿದ್ದಯ್ಯಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.