ADVERTISEMENT

ಕುರ್ಚಿ ಉಳಿಸಿಕೊಳ್ಳಲು ಪ್ರಧಾನಿ ರಾಜ್ಯಕ್ಕೆ: ವಿ.ಎಸ್‌.ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 7 ಮೇ 2023, 3:37 IST
Last Updated 7 ಮೇ 2023, 3:37 IST
ವಿ.ಎಸ್‌.ಉಗ್ರಪ್ಪ
ವಿ.ಎಸ್‌.ಉಗ್ರಪ್ಪ   

ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಲಿದ್ದು, ಕುರ್ಚಿ ಉಳಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌.ಉಗ್ರಪ್ಪ ಲೇವಡಿ ಮಾಡಿದರು.

‘ಒಂದು ರಾಜ್ಯದ ವಿಧಾನಸಭೆ ಚುನಾವಣೆಗೆ ನರೇಂದ್ರ ಮೋದಿ ಅವರಷ್ಟು ಸಲ ಬೇರೆ ಪ್ರಧಾನಿಗಳು ಬಂದಿರಲಿಲ್ಲ. ಮನಮೋಹನ್‌ಸಿಂಗ್‌ ಪ್ರಧಾನಿಯಾಗಿದ್ದಾಗ ಕೇವಲ ಎರಡು ಸಲ ಪ್ರಚಾರಕ್ಕೆ ರಾಜ್ಯಕ್ಕೆ ಬಂದಿದ್ದರು‘ ಎಂದು ಉಗ್ರಪ್ಪ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

‘ಬಳ್ಳಾರಿಗೆ ಪ್ರಚಾರಕ್ಕಾಗಿ ಬಂದಿದ್ದ ಪ್ರಧಾನಿ ಮೋದಿ ಜಿಲ್ಲೆಯ ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿಲ್ಲ. ಈ ಭಾಗದಲ್ಲಾಗಬೇಕಾದ ಅಭಿವೃದ್ಧಿ ಯೋಜನೆಗಳನ್ನು ಕುರಿತು ಪ್ರಸ್ತಾಪಿಸಲಿಲ್ಲ. ಬೆಲೆ ಏರಿಕೆ ಕುರಿತು ಒಂದೇ ಒಂದು ಶಬ್ದವೂ ಇಲ್ಲ. ಬದಲಿಗೆ `ದಿ ಕೇರಳ ಸ್ಟೋರಿ' ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಕುರಿತ ಮೋದಿ ಅವರ ಹೇಳಿಕೆ ಬೌದ್ಧಿಕ ದಿವಾಳಿತನದಿಂದ ಕೂಡಿದೆ‘ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಕರ್ನಾಟಕದಲ್ಲಿ ಅಭಿವೃದ್ಧಿ ಹೆಸರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಜನರ ಸಮಸ್ಯೆಗಳನ್ನು ಬಿಟ್ಟು ಭಾವನಾತ್ಮಕ ವಿಷಯಗಳನ್ನು ಮೋದಿ ಕೆದಕುತ್ತಿದ್ದಾರೆ‘ ಎಂದು ಉಗ್ರಪ್ಪ ಹರಿಹಾಯ್ದರು.

‘ಈಚೆಗೆ ದೇಶಾದ್ಯಂತ 58 ಸಾವಿರ ಕೇಂದ್ರಗಳಲ್ಲಿ 50 ಲಕ್ಷ ಜನರನ್ನು ಸೇರಿಸಿ ಮೋದಿ ಅವರು ವರ್ಚುವಲ್ ಸಭೆ ನಡೆಸಿದ್ದರು. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಜರುಗಿಸಬೇಕಿತ್ತು. ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಯುವ ಬಗ್ಗೆಯೇ ಶಂಕೆ ತಲೆದೋರಿದೆ‘ ಎಂದು ಆತಂಕ ವ್ಯಕ್ತಪಡಿಸಿದರು.

ಆಂಧ್ರದ ಮಾಜಿ ಸಚಿವ ಶೈಲಜಾನಾಥ್‌, ಮಹಾರಾಷ್ಟ್ರದ ಮಾಜಿ ಸಚಿವ ವಸಂತರಾವ್‌ ಕುರ್ಕಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಫೀಕ್ ಮಹಮ್ಮದ್, ಪ್ರಚಾರ ಸಮಿತಿ ಸದಸ್ಯ ವೆಂಕಟೇಶ ಹೆಗಡೆ, ಮುಖಂಡ ಕಲ್ಲುಕಂಬ ಪಂಪಾಪತಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.