ADVERTISEMENT

ಜಲಾನಯನ ಪ್ರದೇಶದಲ್ಲಿ ನಿಂತ ಮಳೆ: ನದಿಯಲ್ಲಿ ತಗ್ಗಿದ ನೀರಿನ ಹರಿವು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 11:26 IST
Last Updated 21 ಆಗಸ್ಟ್ 2020, 11:26 IST
ತುಂಗಭದ್ರಾ ಜಲಾಶಯ
ತುಂಗಭದ್ರಾ ಜಲಾಶಯ   

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಿಂದ ನೀರು ಹರಿಸುವುದು ಕಡಿಮೆ ಮಾಡಿರುವುದರಿಂದ ಶುಕ್ರವಾರ ನದಿಯಲ್ಲಿ ನೀರಿನ ಹರಿವು ಭಾರಿ ಇಳಿಮುಖಗೊಂಡಿದೆ.

ಜಲಾಶಯದ 12 ಕ್ರಸ್ಟ್‌ಗೇಟ್‌ಗಳನ್ನು ತಲಾ ಎರಡು ಅಡಿ ಮೇಲಕ್ಕೆತ್ತಿ ನದಿಗೆ 35,916 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಗುರುವಾರ 20 ಕ್ರಸ್ಟ್‌ಗೇಟ್‌ಗಳನ್ನು ತೆರೆದು 46,698 ಕ್ಯುಸೆಕ್‌ ನೀರು ಬಿಡಲಾಗಿತ್ತು. ಬುಧವಾರ 30 ಕ್ರಸ್ಟ್‌ಗೇಟ್‌ಗಳಿಂದ 1,12,086 ಕ್ಯುಸೆಕ್‌ ನೀರು ಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹದ ಭೀತಿ ಎದುರಾಗಿತ್ತು.

ತಾಲ್ಲೂಕಿನ ಹಂಪಿ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಚಕ್ರತೀರ್ಥ ಸಂಪೂರ್ಣ ಮುಳುಗಡೆಯಾಗಿತ್ತು. ರಾಮ ಲಕ್ಷ್ಮಣ ದೇವಸ್ಥಾನ, ಅದರ ಮಂಟಪದೊಳಕ್ಕೆ ನೀರು ನುಗ್ಗಿತ್ತು. ಕಂಪ್ಲಿ–ಗಂಗಾವತಿ ಸೇತುವೆ ಮೇಲಿನಿಂದ ನೀರು ಹರಿದು ಸಂಚಾರ ಸ್ಥಗಿತಗೊಂಡಿತ್ತು.

ADVERTISEMENT

ಈಗ ಹಂಪಿ ಸ್ಮಾರಕಗಳಿಂದ ನೀರು ದೂರ ಸರಿದಿದೆ. ಸೇತುವೆ ಮೇಲೆ ಪುನಃ ವಾಹನ ಸಂಚಾರ ಆರಂಭಗೊಂಡಿದೆ.
1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯ ಸಂಪೂರ್ಣ ತುಂಬಿದೆ. 49,025 ಕ್ಯುಸೆಕ್‌ ಒಳಹರಿವು ದಾಖಲಾಗಿದೆ.

‘ಜಲಾನಯನ ಪ್ರದೇಶದಲ್ಲಿ ಮಳೆ ನಿಂತಿದೆ. ಶಿವಮೊಗ್ಗದ ತುಂಗಾ ಜಲಾಶಯದ ಹೊರಹರಿವು ತಗ್ಗಿರುವುದರಿಂದ ಅಣೆಕಟ್ಟೆಯ ಒಳಹರಿವು ಕಡಿಮೆಯಾಗಿದೆ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.