ಹೊಸಪೇಟೆ: ರೈತರು ಬೆಳೆದ ಬಾಳೆಹಣ್ಣನ್ನು ಸವಾಲಿನ ಮೂಲಕ ಖರೀದಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ನಗರದ ಎಪಿಎಂಸಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಎಪಿಎಂಸಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಈ ಹಿಂದೆ ಎಪಿಎಂಸಿಯಲ್ಲಿ ಸವಾಲಿನ ಮೂಲಕ ಬಾಳೆಹಣ್ಣು ಖರೀದಿಸಲಾಗುತ್ತಿತ್ತು. ಈಗ ಅದೇ ಪದ್ಧತಿ ಮೂಲಕ ಖರೀದಿಸಬೇಕು. ಯಾರು ಕೂಡ ರೈತರ ಗದ್ದೆಗೆ ಹೋಗಿ ಖರೀದಿಸಲು ಅವಕಾಶ ಕಲ್ಪಿಸಬಾರದು. ಬಾಳೆಹಣ್ಣಿನ ಗೊನೆಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸ ಮಾಡದೆ ಎಲ್ಲಕ್ಕೂ ಒಂದೇ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ರೈತರಿಂದ ಕಮಿಷನ್ ವಸೂಲಿ ಮಾಡಲಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು. ಎಪಿಎಂಸಿಯಲ್ಲಿ ಕುಡಿಯುವ ನೀರು, ವಿಶ್ರಾಂತಿ ಭವನ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಸ್ವಚ್ಛತೆಗೆ ಒತ್ತು ಕೊಡಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್, ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ನಗರ ಘಟಕದ ಅಧ್ಯಕ್ಷ ಟಿ. ನಾಗರಾಜ, ಗೌರವ ಅಧ್ಯಕ್ಷ ರೇವಣಸಿದ್ದಪ್ಪ, ಉಪಾಧ್ಯಕ್ಷರಾದ ಜೆ. ರಾಘವೇಂದ್ರ, ಎಚ್.ಜಿ. ಮಲ್ಲಿಕಾರ್ಜುನ, ಮುಖಂಡರಾದ ಕೆ. ಸುರೇಶ, ಜೆ. ನಾಗರಾಜ್, ನದೀಮ್, ಎಲ್.ಎಸ್. ರುದ್ರಪ್ಪ, ಉದ್ದಾನಯ್ಯ ಸ್ವಾಮಿ, ಅಯ್ಯಣ್ಣ, ರಮೇಶ, ಬಸವರಾಜ, ಎಲ್. ನಾಗೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.