ಸಂಡೂರು: ಪಟ್ಟಣದಲ್ಲಿನ ಪೊಲೀಸ್ ವಸತಿ ಗೃಹಗಳು, ಅಂಕಮ್ಮನಾಳ್ ಗ್ರಾಮದ ರಸ್ತೆಯನ್ನು ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್ಸಿ )ದ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರು ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಮಾತನಾಡಿದ ಅವರು, ‘ಸಂಡೂರು ಪಟ್ಟಣದಲ್ಲಿನ ಪೊಲೀಸ್ ಠಾಣೆಯ ಆವರಣದಲ್ಲಿರುವ ವಸತಿ ಗೃಹ, ಸಿಪಿಐ ಕಚೇರಿಯನ್ನು ನೂತನವಾಗಿ ನಿರ್ಮಿಸುವ ಉದ್ದೇಶದಿಂದ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಲಾಗಿದ್ದು, ಸರ್ಕಾರಕ್ಕೆ ಶೀಘ್ರವಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು. ತಾಲ್ಲೂಕಿನ ಅಂಕಮ್ಮನಾಳ್ ಗ್ರಾಮದಲ್ಲಿನ ಸಾರ್ವಜನಿಕ ಸಂಚಾರದ ಪ್ರಮುಖ ರಸ್ತೆಯನ್ನು ಕೆಎಂಇಆರ್ಸಿ ಅನುದಾನದಲ್ಲಿ ನೂತನ ರಸ್ತೆ ನಿರ್ಮಿಸಲು ಸೂಕ್ತ ಕ್ರಮವಹಿಸಲಾಗುವುದು. ಗಣಿ ಬಾಧಿತ ಗ್ರಾಮಗಳಲ್ಲಿನ ಅಂಗನವಾಡಿ, ಸರ್ಕಾರಿ ಶಾಲೆಯ ಮಕ್ಕಳ ಅಪೌಷ್ಠಿಕತೆ ನಿವಾರಿಸಲು ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮದ ಅನುದಾನದಲ್ಲಿ ಗುಣಮಟ್ಟದ ಆಹಾರ ವಿತರಣೆಗೆ ಮುಂದಿನ ತಿಂಗಳಲ್ಲಿ ಆದೇಶವನ್ನು ಹೊರಡಿಸಲಾಗುವುದು’ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಸಂಡೂರು ವೃತ್ತದ ಸಿಪಿಐ ಮಹೇಶ್ಗೌಡ, ಎಂಜಿನಿಯರುಗಳಾದ ಹೇಮರಾಜ್ ನಾಯ್ಕ್, ಕೊಟ್ರೇಶ್ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.