ಹರಪನಹಳ್ಳಿ: ಕೊಟ್ಟೂರು ಗುರುಬಸವೇಶ್ವರ ಜಾತ್ರೆಗೆ ಪಾದಯಾತ್ರೆ ಹೊರಟಿರುವ ಲಕ್ಷಾಂತರ ಭಕ್ತರಿಗೆ ವಿವಿಧ ಸಂಘ ಸಂಸ್ಥೆಗಳು ಉಚಿತ ಚಿಕಿತ್ಸೆ, ಪಾನೀಯ, ಪ್ರಸಾದ ವಿನಿಯೋಗ ಮಾಡುತ್ತಿವೆ. ದೂರದಿಂದ ಬರುವ ಭಕ್ತರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ.
ತೆಗ್ಗಿನಮಠದ ಆವರಣದಲ್ಲಿ ವರಸದ್ಯೋಜಾತ ಸ್ವಾಮೀಜಿ ಅವರ ನೇತೃತ್ವದಲ್ಲಿ ಎಸ್.ಸಿ.ಎಸ್.ಔಷಧ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲ್ನಡಿಗೆ ತೆರಳಿ ನೋವಿನಿಂದ ಬಳಲುತ್ತಿರುವ ಭಕ್ತರು ಕಾಲುಗಳಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಮಠದ ಆವರಣದಲ್ಲಿ ವಿಶ್ರಾಂತಿ, 24 ಗಂಟೆ ಉಚಿತ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯ ವೈಶ್ಯ ಸಮಾಜದಿಂದ ತಂಪು ಪಾನೀಯ ಮತ್ತು ಚಿಕಿತ್ಸೆ, ಉಚಿತವಾಗಿ ಔಷಧಿ ವಿತರಿಸಲಾಗುತ್ತಿದೆ.
ಬಿಎಸ್ಎನ್ಎಲ್ ನಿವೃತ್ತ ನೌಕರ ಸುಧಾಕರ ಅವರ ಕುಟುಂಬ ತಮ್ಮ ಮನೆಯಂಗಳದಲ್ಲಿ ಆಯೋಜಿಸಿದ್ದ 18ನೇ ವರ್ಷದ ಅನ್ನಸಂತರ್ಪಣೆಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಚಾಲನೆ ನೀಡಿದರು.
ಸುಧಾಕರ, ಎಂ.ವಿ.ಅಂಜಿನಪ್ಪ, ಟಿ.ಎಂ.ಚಂದ್ರಶೇಖರಯ್ಯ ಇದ್ದರು. ತಾಲ್ಲೂಕಿನ ದುಗ್ಗಾವತಿ, ತೆಲಿಗಿ, ಚಿರಸ್ತಹಳ್ಳಿ, ನೀಲಗುಂದ, ಆಸರೆ ಕಾಲೊನಿ, ಮೇಗಳಪೇಟೆ ರಸ್ತೆ, ಕೊಟ್ಟೂರು ರಸ್ತೆಯಲ್ಲಿ ಸಂಜೆ ಪಾದಯಾತ್ರಿಗಳೇ ತುಂಬಿದ್ದರು. ಬಿಸಿ ಇಡ್ಲಿ, ಬಿಸಿ ದೋಸೆ, ಮಂಡಕ್ಕಿ, ಒಗ್ಗರಣೆ, ಮಿರ್ಚಿ, ನೀರು, ಮಜ್ಜಿಗೆ, ಪಾನಕ, ಕಲ್ಲಂಗಡಿ ಹಣ್ಣು, ದ್ರಾಕ್ಷಿ ಸವಿದು ಕೊಟ್ಟೂರಿನತ್ತ ಪ್ರಯಾಣ ಬೆಳೆಸಿದರು. ಶುಕ್ರವಾರವೂ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗಲಿದೆ.
ಸಾವಿರಾರು ಭಕ್ತರಿಗೆ ದಾಸೋಹ
ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಮಠದ ಆವರಣದಲ್ಲಿ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವಕ್ಕೆ ತೆರಳುವ ಶಿವಮೊಗ್ಗ ಚನ್ನಗಿರಿ ಹೊನ್ನಾಳಿ ಹರಿಹರ ದಾವಣಗೆರೆಯಿಂದ ಬರುವ 20 ಸಾವಿರ ಭಕ್ತರಿಗೆ ಪಾಯಸ ರೊಟ್ಟಿ ಚಟ್ನಿ ವ್ಯವಸ್ಥೆ ಮಾಡಲಾಗಿದೆ. ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ಪಂಚಗಣಾಧೀಶರರಲ್ಲಿ ಒಬ್ಬರಾದ ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ಆರಂಭದಲ್ಲಿ ಕಡಿಮೆ ಭಕ್ತರು ಪಾದಯಾತ್ರೆ ಮಾಡುತ್ತಿದ್ದರು. ಆದರೆ ಈಗ ಅರಸೀಕೆರೆ ಮಾರ್ಗವಾಗಿ 20 ಸಾವಿರ ಭಕ್ತರು ತೆರಳುತ್ತಾರೆ. ಅವರಿಗೆ ತೊಂದರೆ ಆಗದ ರೀತಿಯಲ್ಲಿ ಊಟ ಕಲ್ಪಿಸಿ ವಿಶ್ರಾಂತಿಗೆ ಜಾಗದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಮಾಜಿ ಸಂಸದ ವೈ.ದೇವೇಂದ್ರಪ್ಪ ಉದ್ಘಾಟಿಸಿದರು. ಪ್ರಸಾದ ಸಮಿತಿ ಅಧ್ಯಕ್ಷ ಬಿ.ರಾಮಪ್ಪಐ.ಸಲಾಂ ಸಾಹೇಬ್ ಎ.ಎಚ್.ಕೊಟ್ರೇಶ್ ಷಣ್ಮುಖಪ್ಪ ವೃಷಬೇಂದ್ರಯ್ಯ ಶಾಂತಪಾಟೀಲ್ ಉಮಾ ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.