ಬಳ್ಳಾರಿ: ‘ಶ್ರೀಕೃಷ್ಣ ಎಲ್ಲ ವಯಸ್ಸಿನವರಿಗೂ ಪ್ರಿಯನಾದ ದೇವರು. ಆತ ದೇವರಾದರೂ, ಮನುಷ್ಯನಂತೆಯೇ ಬದುಕಿದ್ದ. ಎಲ್ಲರಿಗೂ ನಮ್ಮವನೇ ಎಂದೆನಿಸಿದ್ದ’ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.
ನಗರದ ಜೋಳದರಾಶಿ ದೊಡ್ಡನ ಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಭಾನುವಾರ ಹಮ್ಮಿಕೊಂಡಿದ್ದ ಕೃಷ್ಣ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು.
ಕೃಷ್ಣ ಗೊಲ್ಲರ ಸಮುದಾಯಕ್ಕೆ ಸೇರಿರುವುದರಿಂದ ಗೊಲ್ಲರ ಆರಾಧ್ಯ ದೈವ . ಅದರಾಚೆಗೆ ಕೃಷ್ಣನ ವ್ಯಕ್ತಿತ್ವ ಎಂಥವರನ್ನೂ ಸಮ್ಮೋಹನಗೊಳಿಸುತ್ತದೆ. ಮಗ, ಅಳಿಯ, ಅಣ್ಣ, ಸೋದರಮಾವ, ಪತಿ...ಹೀಗೆ ಕೌಟುಂಬಿಕ ಸಂಬಂಧಗಳ ನೆಲೆಯಲ್ಲಿ ಕೃಷ್ಣನ ಚಮತ್ಕಾರ, ಬದ್ಧತೆ ಅನುಕರಣೀಯ’ ಎಂದರು.
‘ಕೃಷ್ಣ ಜಯಂತಿಯನ್ನು ಸರ್ವರೂ ಒಗ್ಗಟ್ಟಿನಿಂದ ಆಚರಿಸಬೇಕು. ಜಗತ್ತಿಗೆ ದಾರಿ ದೀಪವಾದ ಕೃಷ್ಣನ ಜಯಂತಿಯನ್ನು ಹಿಂದೂಗಳೆಲ್ಲರೂ ವಿಜೃಂಭಣೆಯಿಂದ ಆಚರಿಸಬೇಕು’ ಎಂದರು.
‘ಕೃಷ್ಣ ಜಯಂತಿಯ ದಿನ ಮಡಿಕೆ ಒಡೆಯುವ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಎಲ್ಲ ಕಣ್ಮರೆಯಾಗಿವೆ’ ಎಂದು ವಿಷಾದಿಸಿದರು. ಜಿಲ್ಲಾ ಪಂಚಾಯ್ಇ ಅಧ್ಯಕ್ಷೆ ಸಿ.ಭಾರತಿ ಅಧ್ಯಕ್ಷತೆ ವಹಿಸಿದರು.
ಕೆ.ಇ.ಚಿದಾನಂದಪ್ಪ ವಿಶೇಷ ಉಪನ್ಯಾಸ ನೀಡಿದರು. ಪಾಲಿಕೆ ಸದಸ್ಯರಾದ ಚಂದ್ರಕಲಾ, ಬೆಣಕಲ್ ಬಸವರಾಜ, ಗೊಲ್ಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ತಿಮ್ಮಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಮುಖಂಡರಾದ ವೆಂಕಟೇಶ್ ಯಾದವ, ಆಶಾಲತಾ, ಗೋವಿಂದ ರಾಜುಲು, ಕೃಷ್ಣಮೂರ್ತಿ, ಪಿ.ಗಾದೆಪ್ಪ, ಸೋಮಪ್ಪ, ವೆಂಕಟೇಶಪ್ಪ, ವೈ.ರಂಗಪ್ಪ, ಸೋಮರೆಡ್ಡಿ, ಭಾನುದಾಸ್ ಇದ್ದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀಕೃಷ್ಣನ ಮೂರ್ತಿಯ ಮೆರವಣಿಗೆಯು ಮುನ್ಸಿಪಲ್ ಕಾಲೇಜು ಮೈದಾನದಿಂದ ರಂಗಮಂದಿರದವರೆಗೂ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.