
ಕುರುಗೋಡು: ಕೊರೆಯುವ ಚಳಿಗೆ ತಾಲ್ಲೂಕಿನ ಜನರು ತತ್ತರಿಸಿಹೋಗಿದ್ದಾರೆ. ಸಂಜೆ ಆರು ಗಂಟೆಯಿಂದಲೇ ಶೀತಗಾಳಿ ಚಳಿ ಆರಂಭಗೊಂಡು ಬೆಳಿಗ್ಗೆ ಎಂಟು ಗಂಟೆಯಾದರೂ ಕಡಿಮೆಯಾಗುತ್ತಿಲ್ಲ.
ಕೃಷಿ ಚಟುವಟಿಕೆಯಲ್ಲಿ ತೊಡಗಲು ರೈತರು ಮತ್ತು ಕೃಷಿ ಕಾರ್ಮಿಕರು ಬೆಳಿಗ್ಗೆ ಶೀತಗಾಳಿ ಮತ್ತು ಕೊರೆಯುವ ಚಳಿಯಲ್ಲಿಯೇ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಟಾವಿನ ಹಂತದಲ್ಲಿರುವ ಮೆಣಸಿನಕಾಯಿ ಬೆಳೆ ತಂಪು ವಾತಾವರಣದಿಂದ ಮುದುಡತೊಡಗಿದೆ.
ಶಾಲಾ ಕಾಲೇಜುಗಳಲ್ಲಿ ಶನಿವಾರ ಬೆಳಗಿನಜಾವ ತರಗತಿಗಳು ಜರುಗಲಿದ್ದು, ಚಳಿಯ ಪರಿಣಾಮ ಹಾಜರಾಗಿ ಕಡಿಮೆಯಾಗುತ್ತಿರುವುದು ಕಂಡುಬರುತ್ತದೆ. ಬೆಳಗಿನಜಾವ ಪತ್ರಿಕೆ ಮತ್ತು ಹಾಲು ಇತರೇ ವಸ್ತುಗಳನ್ನು ಹಂಚುವವರ ಗೋಳು ಕೇಳತೀರದಾಗಿದೆ.
ಕಳೆದ ವಾರದಿಂದ ಶೀತಗಾಳಿ ಮತ್ತು ಚಳಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕ ಮಕ್ಕಳು ಮತ್ತು ದೊಡ್ಡವರಲ್ಲಿ ಶೀಲ, ಕೆಮ್ಮು, ಕಫ ದಂತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಳಿಯಿಂದ ರಕ್ಷಿಸಿಕೊಳ್ಳಲು ಕೆಲವು ಜನರು ರಸ್ತೆಗಳ ಪಕ್ಕದಲ್ಲಿ ಬೆಂಕಿಹಾಕಿಕೊಂಡು ಚಳಿಕಾಯಿಸುತ್ತಿರುವ ದೃಶ್ಯ ಕಂಡುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.