
ಕುರುಗೋಡು: ‘ಮನುಷ್ಯರು ಸಂಸ್ಕಾರವಂತರಾಗಿ ಸಮಾಜದಲ್ಲಿ ಮೌಲ್ಯಯುತ ಜೀವನ ನಡೆಸಬೇಕು’ ಎಂದು ಸಿದ್ದರಾಮಾನಂದಪುರಿ ಶ್ರೀ ಹೇಳಿದರು.
ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಗುರುವಾರ ಭಕ್ತ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ಅವರ ಮೂರ್ತಿ ಅನಾವರಣಗೊಳಿಸಿ ಅವರು ಆಶೀರ್ವಚನ ನೀಡಿದರು.
‘ಜಯಂತಿಗಳ ಆಚರಣೆಗಿಂತ ಶರಣರ, ಸಂತರ, ದಾಸರ, ವಚನಕಾರರ ಜೀವನ ಶೈಲಿ ಅನುಕರಣೆ ಬಗ್ಗೆ ಹೆಚ್ಚು ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಭೀಮಲಿಂಗಪ್ಪ ಮಾತನಾಡಿ, ‘ಭಕ್ತ ಕನಕದಾಸ ಮತ್ತು ವೀರ ಸಂಗೊಳ್ಳಿ ರಾಯಣ್ಣ ಅವರು ಎಲ್ಲ ಸಮಾಜದವರನ್ನು ಸಮಾನವಾಗಿ ಕಂಡವರು’ ಎಂದರು.
ಪ್ರಮುಖರಾದ ದಮ್ಮೂರು ಸೋಮಪ್ಪ, ದರಪ್ಪನಾಯಕ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ. ಪಿ.ಎಲ್.ಗಾದಿಲಿಂಗನಗೌಡ, ಎನ್.ಕರಿಬಸಪ್ಪ ಮತ್ತು ನಂದಕುಮಾರ್ ಮಾತನಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕನಕದಾಸ, ಸಂಗೊಳ್ಳಿ ರಾಯಣ್ಣ ಮತ್ತು ಶರಣ ಗೂಳ್ಯಂ ಗಾದಿಲಿಂಗಪ್ಪ ಅವರ ಚಿತ್ರಗಳ ಮೆರವಣಿಗೆ ನಡೆಯಿತು.
ಗ್ರಾಮದ ಸಿರಿಗೇರಮ್ಮ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಾಗನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡಿತು.
ಪೂರ್ಣಕುಂಭ, ಮಹಿಳೆಯರ ಕಳಸ, ಡೊಳ್ಳು, ಸಮಾಳ, ಮಂಗಳವಾಧ್ಯ ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದ್ದರು.
ಭಕ್ತರು ಸಿದ್ದರಾಮಾನಂದಪುರಿ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಡ್ರೈವರ್ ಹುಲಗಪ್ಪ, ಪಿಎಸ್ಐ ವೈ.ಶಶಿಧರ ನಾಯಕ್, ಎಸ್.ಎಂ. ಅಡಿವೆಯ್ಯ ಸ್ವಾಮಿ, ನಿಟ್ಟೂರು ಹನುಮಂತ, ಈರನಾಗಪ್ಪ ಮತ್ತು ಶೇಕ್ಷಾವಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.